Mangalore and Udupi news
Blog

ಧರ್ಮಸ್ಥಳ ಪ್ರಕರಣ ಇಂದಿನಿಂದ ಎಸ್‌ಐಟಿ ತನಿಖೆ ಪ್ರಾರಂಭ

*ಶುಕ್ರವಾರ ರಾತ್ರಿ ಧರ್ಮಸ್ಥಳ ಪೊಲೀಸ್‌ ಠಾಣೆಗೆ ಆಗಮಿಸಿ ದಾಖಲೆಗಳನ್ನು ಪಡೆದುಕೊಂಡ ಅಧಿಕಾರಿಗಳು*

ಮಂಗಳೂರು : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣದ

ತನಿಖೆಯನ್ನು ಎಸ್‌ಐಟಿ ಇಂದಿನಿಂದ ನಡೆಸಲಿದೆ. ಶುಕ್ರವಾರ ತಡರಾತ್ರಿಯೇ ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಿದ ಎಸ್‌ಐಟಿ ತನಿಖಾಧಿಕಾರಿ, ಕೇಸ್ ಫೈಲ್ ಪಡೆದಿದ್ದಾರೆ. ಬೆಳ್ತಂಗಡಿಯಲ್ಲಿ ಕಚೇರಿ ತೆರೆದಿರೋ ತಂಡ ಇಂದೇ ತನಿಖೆಗೆ ಇಳಿಯಲಿದ್ದು, ಧರ್ಮಸ್ಥಳಕ್ಕೂ ಭೇಟಿ ನೀಡಲಿದೆ ಎಂದು ವರದಿಯಾಗಿದೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದ ದೂರುದಾರನ ಪರವಾಗಿ ಜುಲೈ 3 ರಂದು ವಕೀಲರು ಧರ್ಮಸ್ಥಳ ಪೊಲೀಸ್‌ ಠಾಣೆಗೆ ಆತನ ಹಸ್ತಾಕ್ಷರದ ಪ್ರತಿಯನ್ನು ಸಲ್ಲಿಸಿದ್ದರು. ಮಾರನೇ ದಿನ ಎಫ್‌ಐಆ‌ರ್ ದಾಖಲಾಗಿದ್ದು, ಸ್ಥಳ ಮಹಜರು ನಡೆಸಿ ದೂರುದಾರನ ಸಮ್ಮುಖದಲ್ಲಿ ಶವಗಳನ್ನ ಅಗೆದು ತೆಗೆಯಲು ಪೊಲೀಸರು ನ್ಯಾಯಾಲಯದ ಅನುಮತಿಗೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಪ್ರಕರಣ ತನಿಖೆಯನ್ನು ನಡೆಸಲು ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದ ನಾಲ್ಕು ಐಪಿಎಸ್ ಅಧಿಕಾರಿಗಳ ಸಹಿತ ಒಟ್ಟು 20 ಮಂದಿಯ ಎಸ್‌ಐಟಿಯನ್ನು ರಚಿಸಿ ಸರ್ಕಾರ ಆದೇಶಿಸಿದೆ. ಹೀಗಾಗಿ ಶುಕ್ರವಾರ ರಾತ್ರಿ ಮಂಗಳೂರಿಗೆ ಆಗಮಿಸಿದ ಎಸ್‌ಐಟಿ ತಂಡ ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದೆ. ಇನ್ನು ಡಿಐಜಿ ಅನುಚೇತ್ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಳಿಕ ತಡರಾತ್ರಿ ಧರ್ಮಸ್ಥಳ ಠಾಣೆಗೆ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ ಆಗಮಿಸಿ ಕೇಸ್ ಫೈಲ್ ಪಡೆದಿದ್ದಾರೆ. ಧರ್ಮಸ್ಥಳ ಪೊಲೀಸ್‌ ಠಾಣೆಯ ಸಬ್ ಇನ್ಸೆಕ್ಟ‌ರ್, ಪ್ರಕರಣದ ಈವರೆಗಿನ ತನಿಖಾಧಿಕಾರಿ ಸಮರ್ಥ್ ಗಾಣಿಗೇರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ತನಿಖೆ ಒಂದು ಹಂತಕ್ಕೆ ಬಂದ ಬಳಿಕ ನ್ಯಾಯಾಲಯದ ಅನುಮತಿ ಪಡೆದು ದೂರುದಾರನನ್ನ ಶವ ಹೂತಿಟ್ಟ ಸ್ಥಳಗಳಿಗೆ ಕರೆದುಕೊಂಡು ಹೋಗಿ ಆತನ ಸಮ್ಮುಖದಲ್ಲೇ ಮಣ್ಣು ಅಗೆದು ಶವಗಳನ್ನ ಹೊರ ತೆಗೆಯೋ ಪ್ರಕ್ರಿಯೆ ನಡೆಯಲಿದೆ. ಆತನ ದೂರಿನಂತೆ ಸುಮಾರು 20 ವರ್ಷಗಳ ಹಿಂದೆ ಶವಗಳನ್ನ ಹೂತಿಟ್ಟಿರೋದು ನಿಜವಾಗಿದ್ದರೆ ಅದರ ಅಸ್ತಿಪಂಜರಗಳು ಸಿಗೋ ಸಾಧ್ಯತೆ ಇದೆ. ಆ ಬಳಿಕ ಅದರ ಆಧಾರದಲ್ಲಿ ಮುಂದಿನ ತನಿಖೆ ನಡೆಯಲಿದೆ.

Related posts

Leave a Comment