ಬೆಳ್ತಂಗಡಿ: ಕಾರಿನಲ್ಲಿ ಅಕ್ರಮವಾಗಿ ಮೂರು ದನಗಳನ್ನು ಸಾಗಾಟ ಮಾಡುತ್ತಿದ್ದನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ.ಬಂಧಿತರು ಉಳ್ಳಾಲ ತಾಲೂಕಿನ ಸಜಿಪ ಪಡು ಗ್ರಾಮದ ಕೋಟೆಕನಿ ನಿವಾಸಿ ಮುಹಮ್ಮದ್ ಸಿನಾನ್ (25) ಮತ್ತು ಉಳ್ಳಾಲ ತಾಲೂಕಿನ ಸಜಿಪನಾಡು ಗ್ರಾಮದ ತಂಚಿಬೆಟ್ಟು ನಿವಾಸಿ ಇಬ್ರಾಹಿಂ ಖಲೀಲ್ ಯಾನೆ ತೌಸೀಫ್(38) ಎಂದು ತಿಳಿದು ಬಂದಿದೆ.ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪಟ್ಟೂರು ಎಂಬಲ್ಲಿ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ ಆರ್ ಗಾಣಿಗೇರ ನೇತೃತ್ವದ ತಂಡ ಭಾನುವಾರ ಕಾರನ್ನು ತಡೆದು ನಿಲ್ಲಿಸಿ ಪರಿಶೀಲನೆ ಮಾಡಿದಾಗ ಅಕ್ರಮವಾಗಿ ಮೂರು ದನಗಳನ್ನು ಸಾಗಾಟ ಮಾಡುತ್ತಿದ್ದನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳಿಬ್ಬರು ಮೂರು ದನಗಳನ್ನು ಜೋಹಾರ ಪಟ್ಟೂರು ಗ್ರಾಮದಿಂದ ಖರೀದಿಸಿ ಮಾಂಸ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಕಾರು ಮತ್ತು ಮೂರು ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

