ಕಾಸರಗೋಡು: ನಗರದ ತಳಂಗರೆಯ ಪಳ್ಳಿಕ್ಕಾಲ್ ಪ್ರದೇಶದಲ್ಲಿ ಬಾವಿಗೆ ಬಿದ್ದ ವೃದ್ಧನನ್ನು ರಕ್ಷಿಸಲು ಇಳಿದ ಕಾರ್ಮಿಕನೂ ಮೇಲಕ್ಕೆ ಬರಲಾಗದೆ ಸಿಲುಕಿಕೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
ಸುಮಾರು 15 ಅಡಿ ಆಳದ ಬಾವಿಗೆ 74 ವರ್ಷದ ನೆಲ್ಲಿಕುಂಜೆ ನಿವಾಸಿ ಟಿ.ಎಂ. ಮುನೀರ್ ಆಕಸ್ಮಿಕವಾಗಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯನ್ನು ಕಂಡ ನಾಗರಿಕರು ಸಹಾಯಕ್ಕೆ ಧಾವಿಸಿದ್ದು, ಉತ್ತರ ಪ್ರದೇಶ ಮೂಲದ 30 ವರ್ಷದ ಲುಕ್ಮಾನ್ನವರು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ರಕ್ಷಿಸಲು ಪ್ರಯತ್ನಿಸಿದರೂ ವಿಫಲರಾಗಿದ್ದಾರೆ. ಇದರಿಂದ ಇಬ್ಬರೂ ಬಾವಿಯೊಳಗೆ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳೀಯರ ಮಾಹಿತಿ ಮೇರೆಗೆ ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಗ್ಗದ ಸಹಾಯದಿಂದ ಇಬ್ಬರನ್ನೂ ಮೇಲಕ್ಕೆತ್ತಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

