ಉಪ್ಪಿನಂಗಡಿ: ಮೃತರಾದ ತಿಲಕಾನಂದ ಪೂಜಾರಿ ಅವರ ಕುಟುಂಬವು, ಮೃತದೇಹವನ್ನು ಶೀಘ್ರವಾಗಿ ತಾಯ್ನಾಡಿಗೆ ಸಾಗಿಸಲು ಸೂಕ್ತ ವ್ಯಕ್ತಿಗಳ ಸಂಪರ್ಕಕ್ಕಾಗಿ ಶ್ರಮಿಸುತ್ತಿದ್ದಾಗ, ಕೆಸಿಎಫ್ನ ಪರಿಚಯವು ನಿರೀಕ್ಷೆಯಂತೆ ಫಲಕಾರಿಯಾಯಿತು.
ಸೌದಿ ಅರೇಬಿಯಾದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಅಶ್ರಫ್ ನೀರಕಟ್ಟೆ ಅವರ ನಿರ್ದೇಶನದಂತೆ, ಕೆಸಿಎಫ್ ಯುಎಇ ನಾಯಕರಾದ ಸಮದ್ ಬೀರಾಲಿ, ಹಕೀಂ ತುರ್ಕಳಿಕೆ ಹಾಗೂ ಬ್ಯಾರೀಸ್ ಚೇಂಬರ್ಸ್ ಅಧ್ಯಕ್ಷ ಹಿದಾಯತ್ ಅಡ್ಡೂರು ಅವರು ತಕ್ಷಣವೇ ಕಾರ್ಯಪ್ರವೃತ್ತರಾದರು.
ಇವರು ಮೃತರ ಸಂಪೂರ್ಣ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ, ಮೃತದೇಹವನ್ನು ಸ್ವಂತ ಊರಿಗೆ ಕಳುಹಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಈ ಪ್ರಕ್ರಿಯೆಯ ಫಲವಾಗಿ ಇಂದು ರಾತ್ರಿ ವೇಳೆಗೆ ಮೃತದೇಹವು ಉಪ್ಪಿನಂಗಡಿಗೆ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಳೆದ ಹದಿಮೂರು ವರ್ಷಗಳಿಂದ ಯುಎಇ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್), ತನ್ನ ವಿವಿಧ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳಿಂದ ಅನಿವಾಸಿ ಕನ್ನಡಿಗರಿಗೆ ಅಭಯ ಕೇಂದ್ರವಾಗಿ ನಿಂತಿದೆ. ಇಂತಹ ಸಂದರ್ಭಗಳಲ್ಲಿ ಕೆಸಿಎಫ್ ನೀಡಿದ ತ್ವರಿತ ಮತ್ತು ನಿಸ್ವಾರ್ಥ ನೆರವು ಸಮುದಾಯದ ಬದ್ಧತೆಯನ್ನು ಎತ್ತಿ ಹಿಡಿದಿದೆ.