ಕೋಟ: ಮಣೂರು ಸಮೀಪ ಬೈಕಿಗೆ ಕಾಡುಹಂದಿ ಡಿಕ್ಕಿಯಾಗಿ ಬೈಕಿನಲ್ಲಿದ್ದ ಗಂಗೊಳ್ಳಿ ಪೊಲೀಸ್ ಠಾಣೆಯ ಎಎಸ್ಐ ಗಾಯಗೊಂಡ ಘಟನೆ ಮಂಗಳವಾರ ಸಂಭವಿಸಿದೆ. ಗಾಯಗೊಂಡ ಪಿಎಸ್ಐ ಬನ್ನಾಡಿಯ ನಿವಾಸಿ ಬಸವರಾಜ್ ಪಿ.ಎಂ. ಎಂದು ತಿಳಿದು ಬಂದಿದೆ.
ಗಸ್ತು ಕರ್ತವ್ಯ ಮುಗಿಸಿ ಬೆಳಗಿನ ಜಾವ ಮನೆಗೆ ವಾಪಸಾಗುತ್ತಿದ್ದಾಗ ಬ್ರಹ್ಮಾವರ ತಾಲೂಕು ಮಣೂರಿನಲ್ಲಿ ಕಾಡು ಹಂದಿ ಅಡ್ಡ ಬಂದು ಬೈಕ್ ಸಮೇತ ರಸ್ತೆಗೆ ಬಿದ್ದರು. ಅದನ್ನು ಕಂಡ ಲಾರಿಯೊಂದರ ಚಾಲಕನು ಬಸವರಾಜ್ ಅವರನ್ನು ರಸ್ತೆಯ ಬದಿಯಲ್ಲಿ ಕುಳ್ಳಿರಿಸಿ ಉಪಚರಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಳಿಕ ರಸ್ತೆಯಲ್ಲಿ ಬಿದ್ದಿದ್ದ ಬೈಕನ್ನು ಬದಿಗೆ ಸರಿಸಲೆಂದು ಹೊರಡುವಷ್ಟರಲ್ಲಿ ಕುಂದಾಪುರ ಕಡೆಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದನ್ನು ಅದರ ಚಾಲಕ ಬೈಕಿನ ಮೇಲೆಯೇ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.