ಸುಳ್ಯ: ಮದುವೆಯಾಗಲು ನಿರಾಕರಿಸಿದ್ದಕ್ಕೆ ವಿವಾಹಿತೆಗೆ ಯುವಕನೊಬ್ಬ ಚಾಕುವಿನಿಂದ ಇರಿದ ಘಟನೆ ಅಡೂರಿನಲ್ಲಿ ನಡೆದಿದೆ.ಆರೋಪಿಯನ್ನು ಬಂಧಿಸಲಾಗಿದೆ. ಮಂಡೆಕೋಲು ಗ್ರಾಮದ ಕುಂಗ್ಕಣ್ಣ ಎಂಬವರ ಪುತ್ರ ಪ್ರತಾಪ್ ಮಣಿಯಾಣಿ (36) ಬಂಧಿತ ಆರೋಪಿ. ಮಂಡೆಕೋಲು ಗ್ರಾಮದ ತೋಟಪ್ಪಾಡಿ ಜಯರಾಜ ಅವರ ಪತ್ನಿ ರೇಖಾ ಚಾಕು ಇರಿತಕ್ಕೆ ಒಳಗಾದವರು.
ಮಂಡೆಕೋಲು ಗ್ರಾಮದ ತೋಟಪ್ಪಾಡಿ ಜಯರಾಜ ಅವರಿಗೆ ಅಡೂರಿನ ಬಳ್ಳಕಾನ ಕಿಟ್ಟು ನಾಯ್ಕ ಎಂಬವರ ಪುತ್ರಿ ರೇಖಾ ಎಂಬವರೊಂದಿಗೆ 2015ರಲ್ಲಿ ವಿವಾಹವಾಗಿತ್ತು. ಈ ದಂಪತಿಗೆ ಒಬ್ಬ ಹೆಣ್ಣು ಮಗಳಿದ್ದಾಳೆ. ಮಗಳನ್ನು ಶಾಲೆಗೆ ತಾಯಿ ಕರೆದುಕೊಂಡು ಹೋಗುವಾಗ ಒಂದು ವರ್ಷದ ಹಿಂದೆ ರೇಖಾರಿಗೆ ಕನ್ಯಾನದ ಪ್ರತಾಪರ ಪರಿಚಯವಾಗಿತ್ತು. ಇದೇ ಪರಿಚಯ ಸ್ನೇಹ, ಪ್ರೀತಿಗೆ ತಿರುಗಿ ಪರಸ್ಪರ ಮೊಬೈಲ್ನಲ್ಲಿ ಸಂಪರ್ಕದಲ್ಲಿದ್ದರು. ಇದು ಒಂದು ವರ್ಷದ ಹಿಂದೆ ರೇಖಾರ ಗಂಡ ಜಯರಾಜ್ರಿಗೆ ಗೊತ್ತಾಗಿ ಅವರು ರೇಖಾರ ಮನೆಯವರಿಗೆ ವಿಷಯ ತಿಳಿಸಿದ್ದರು. ಬಳಿಕ ರೇಖಾ ತಾಯಿ ಮನೆ ಸೇರಿದ್ದರು. ಬಳಿಕ ಈ ಪ್ರಕರಣ ಮಂಡೆಕೋಲು ಗ್ರಾಮ ಪಂಚಾಯತ್ ಸದಸ್ಯರೊಬ್ಬರ ಮುಖಾಂತರ ಮಾತುಕತೆ ನಡೆದು, ಜಯರಾಜ್ ಮನೆ ಬೇರೆ ಮಾಡಿದರೆ ನಾನು ಆತನೊಂದಿಗೆ ಇರುವುದಾಗಿ ರೇಖಾ ಬೇಡಿಕೆ ಇಟ್ಟರೆಂದೂ, ಆದರೆ ಬಳಿಕ ರೇಖಾ ಮನಸ್ಸು ಬದಲಿಸಿ, ತಾನು ತಾಯಿ ಮನೆಯಲ್ಲೇ ಇರುವುದಾಗಿ ಹೇಳಿದ್ದರು.ಈ ಬಗ್ಗೆ ಜಯರಾಜ್ ಸುಳ್ಯ ಪೋಲೀಸರಿಗೆ ದೂರು ನೀಡಿದ ಮೇರೆಗೆ ಪೋಲೀಸರು ರೇಖಾರನ್ನು ಕರೆಸಿ ಮಾತನಾಡಿದ್ದರು. ಆದರೆ ಗಂಡನ ಮನೆಗೆ ಬಂದು ಇರಲು ರೇಖಾ ಒಪ್ಪಿರಲಿಲ್ಲ. ಬಳಿಕ ರೇಖಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ಅದೀಗ ಕಾಸರಗೋಡು ನ್ಯಾಯಾಲಯದಲ್ಲಿ ಅಂತಿಮ ಹಂತದಲ್ಲಿದೆ ಎನ್ನಲಾಗುತ್ತಿದೆ.
