ಉಪ್ಪಿನಂಗಡಿ: ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿನ ದೇಜಪ್ಪ ಮೂಲ್ಯ ಅವರ ಹಟ್ಟಿಯಿಂದ ಗಬ್ಬದ ದನವನ್ನು ಕದ್ದೊಯ್ದ ಕಟುಕರು ಅವರ ಜಮೀನಿನಲ್ಲಿಯೇ ಹತ್ಯೆ ಮಾಡಿ ಮಾಂಸವನ್ನು ಸಾಗಿಸಿದ ಘಟನೆ ಗುರುವಾರ ಮುಂಜಾನೆ ಸಂಭವಿಸಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗೀತೇಶ್ ಕೆ. (26) ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಗುರುವಾರ ನಸುಕಿನ 2.30ರ ವೇಳೆಗೆ ಹಸು ಹಟ್ಟಿಯಲ್ಲಿಯೇ ಇರುವುದನ್ನು ಕಂಡಿದ್ದು, ಮುಂಜಾನೆ 6.30ಕ್ಕೆ ಹಟ್ಟಿಗೆ ನಾಪತ್ತೆಯಾಗಿತ್ತು. ಹುಡುಕಾಟ ನಡೆಸಿದಾಗ ತಮ್ಮ ಜಮೀನಿನಲ್ಲಿ ಅದರ ಚರ್ಮ ಮತ್ತು ಅಂಗಾಂಗಗಳು ಚದುರಿ ಬಿದ್ದಿರುವುದು ಕಾಣಿಸಿತು. ಕಳ್ಳರು ಅಲ್ಲಿಯೇ ಕೊಂದು ಚರ್ಮ ಸುಲಿದು ಮಾಂಸವನ್ನು ಕೊಂಡೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.
ಹಟ್ಟಿಯಿಂದ ದನವನ್ನು ಕದ್ದು, ಪಕ್ಕದ ಜಮೀನಿನಲ್ಲಿಯೇ ಹತ್ಯೆ ಮಾಡಿ ಮಾಂಸವನ್ನು ಹೊತ್ತೂಯ್ದ ಪ್ರಕರಣದಿಂದ ಪರಿಸರದಲ್ಲಿ ಭೀತಿ ನೆಲೆಸಿದೆ. ಸ್ಥಳಕ್ಕೆ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ನಾಯಕರಾದ ಅರುಣ್ ಕುಮಾರ್ ಪುತ್ತಿಲ, ನರಸಿಂಹ ಮಾಣಿ, ರಾಜ್ಪೂತ್ ಕಲ್ಲಡ್ಕ ಮೊದಲಾದವರು ಭೇಟಿ ನೀಡಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕಠಿನ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಯ ಭರವಸೆ ನೀಡಿರುತ್ತಾರೆ.