ಉಡುಪಿ: ವ್ಯಕ್ತಿಯೊಬ್ಬರನ್ನು ಹನಿ ಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿ ಆತನಿಗೆ ಹಲ್ಲೆಗೈದು 76,200 ರೂ. ಸುಲಿಗೆ ಮಾಡಿದ ಮಹಿಳೆ ಸಹಿತ ಆರುಮಂದಿ ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬೈಂದೂರು ನಾವುಂದ ಗ್ರಾಮದ ಸವದ್ ( 28), ಕುಂದಾಪುರ ಗುಲ್ವಾಡಿ ಗ್ರಾಮದ ಸೈಪುಲ್ಲಾ ( 38), ಕುಂದಾಪುರ ಹಂಗಳೂರು ಗ್ರಾಮದ ಮೊಹಮ್ಮದ್ ನಾಸೀರ್ ಶರೀಫ್ ( 36), ಕುಂದಾಪುರ ಕುಂಭಾಶಿ ಗ್ರಾಮದ ಅಬ್ದುಲ್ ಸತ್ತಾರ್ ( 23), ಶಿವಮೊಗ್ಗ ಜಿಲ್ಲೆಯ ಹೊಸನಗರದ ಅಬ್ದುಲ್ ಅಜೀಜ್ ( 26) ಹಾಗೂ ಕುಂದಾಪುರ ಕೋಡಿ ನಿವಾಸಿ ಆಸ್ಮಾ (43) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 18 ಲಕ್ಪ ಮೌಲ್ಯದ ಕಾರು ವಶ ಪಡಿಸಿಕೊಳ್ಳಲಾಗಿದೆ.
ಘಟನೆ ವಿವರ:
ಸಂದೀಪ್ ಕುಮಾರ್ ಎಂಬವರಿಗೆ ಮೂರು ತಿಂಗಳ ಹಿಂದೆ ಅಬ್ದುಲ್ ಸವಾದ್ ಎಂಬಾತ ಪರಿಚಯವಾಗಿದ್ದು, ಆತ ಆಸ್ಮಾ ಎಂಬಾಕೆಯ ಪರಿಚಯ ಮಾಡಿಕೊಟ್ಟು ಮೊಬೈಲ್ ಸಂಖ್ಯೆ ನೀಡಿ ಆಕೆಯೊಂದಿಗೆ ಸಂಬಂಧ ಬೆಳೆಸಿಕೊಳ್ಳುವಂತೆ ತಿಳಿಸಿದ್ದ. ನಂತರ ಸಂದೀಪ್ ಆರೋಪಿ ಆಸ್ಮಾಳಿಗೆ ಕರೆಮಾಡಿದ್ದು, ಆಕೆ ಸೆ.2ರಂದು ಸಂಜೆ 6.30ಕ್ಕೆ ಕುಂದಾಪುರದ ಮಲ್ನಾಡ್ ಪೆಟ್ರೋಲ್ ಬಂಕ್ ಬಳಿಯ ಆರ್ ಆರ್ ಪ್ಲಾಝಾ ಬಳಿ ಬರಲು ತಿಳಿಸಿದ್ದಳು. ಅದರಂತೆ ಸಂದೀಪ್ ಆಟೋ ರಿಕ್ಷಾದಲ್ಲಿ ಅಲ್ಲಿಗೆ ಹೋಗಿದ್ದರು. ಬಳಿಕ ಆರೋಪಿ ಆಸ್ಮಾ ಅವಳ ಮನೆಗೆ ಕರೆದುಕೊಂಡು ಹೋಗಿದ್ದಳು. ಬಳಿಕ ಆಕೆ ಉಳಿದ ಆರೋಪಿಗಳನ್ನು ಕರೆ ಮಾಡಿ ಕರೆಯಿಸಿಕೊಂಡಿದ್ದು, 3 ಲಕ್ಷ ಹಣ ಕೊಟ್ಟು ಹೋಗಬೇಕೆಂದು ಚಾಕು ತೋರಿಸಿ ಬೆದರಿಸಿದ್ದಾರೆ. ಆಗ ಸಂದೀಪ್ ಓಡಿ ಹೋಗಲು ಪ್ರಯತ್ನಿಸಿದಾಗ ಆರೋಪಿಗಳಾದ ಸವದ್, ಸೈಪುಲ್ಲಾ, ಮೊಹಮ್ಮದ್ ನಾಸೀರ್ ಶರೀಫ್ , ಅಬ್ದುಲ್ ಸತ್ತಾರ್ ಮತ್ತು ಅಬ್ದುಲ್ ಅಜೀಜ್ ಸೇರಿಕೊಂಡು ಕೈಗಳನ್ನು ನೈಲಾನ್ ಹಗ್ಗದಿಂದ ಕಟ್ಟಿ ಹಲ್ಲೆ ಮಾಡಿದ್ದಾರೆ. ಪ್ಯಾಂಟ್ ಜೇಬಿನಲ್ಲಿದ್ದ 6,200 ರೂ. ಬಲವಂತದಿಂದ ಕಸಿದುಕೊಂಡಿದ್ದಾರೆ. ಹೆಚ್ಚಿನ ಹಣ ನೀಡುವಂತೆ ಬೆದರಿಸಿದಾಗ ಸೈಪುಲ್ಲಾ ಖಾತೆಗೆ 30 ಸಾವಿರ ಹಣ ಹಾಕಿದ್ದಾರೆ. ಆ ಬಳಿಕ ಬಲತ್ಕಾರವಾಗಿ ಎಟಿಎಂ ಕಾರ್ಡ್ ಕಿತ್ತುಕೊಂಡು ಪಿನ್ ನಂಬ್ರ ಪಡೆದುಕೊಂಡು 40 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾರೆ ಎಂದು ಸಂದೀಪ್ ದೂರಿನಲ್ಲಿ ತಿಳಿಸಿದ್ದಾರೆ.
