ಉಡುಪಿ: ಬೆಂಗಳೂರು ಮೂಲದ ಮಹಿಳೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಮೀಪದ ಸೌರ್ಪಣಿಕ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ.
ಬೆಂಗಳೂರಿನ ತ್ಯಾಗರಾಜ ನಗರದ ವಸುಧಾ ಚಕ್ರವರ್ತಿ(46) ನಾಪತ್ತೆಯಾದವರು. ಆ.27ರಂದು ದೇವಸ್ಥಾನಕ್ಕೆ ಆಗಮಿಸಿದ ವಸುಧಾ, ಮಾನಸಿಕ ಸಮಸ್ಯೆ ಇರುವ ರೀತಿಯಲ್ಲಿ ಅಸಭ್ಯವಾಗಿ ವರ್ತಿಸಿದ್ದು, ನಂತರ ರಸ್ತೆಯಲ್ಲಿ ಓಡಿಕೊಂಡು ಹೋಗಿದ್ದಾರೆ. ಸ್ಥಳೀಯರ ಮಾಹಿತಿಯಂತೆ ಆಕೆ ಸೌಪರ್ಣಿಕಾ ನದಿಯಲ್ಲಿ ಇಳಿದಿದ್ದು, ನದಿಯಲ್ಲಿ ಕೊಚ್ಚಿ ಕೊಂಡು ಹೋಗಿರುವುದು ತಿಳಿದುಬಂದಿದೆ. ನದಿಯಲ್ಲಿ ಕಾಲು ಜಾರಿ ಬಿದ್ದು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾದ ಮಹಿಳೆಗಾಗಿ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಹಾಗೂ ಅಗ್ನಿಶಾಮಕದಳ ಹುಡುಕಾಟ ನಡೆಸುತ್ತಿದೆ. ನೀರಿನ ರಭಸ ತೀವ್ರವಾಗಿರುವುದರಿಂದ ಹುಡುಕಾಟಕ್ಕೆ ಅಡ್ಡಿಯಾಗುತ್ತಿದೆ. ಆದರೂ, ಕಳೆದ ಎರಡು ದಿನಗಳಿಂದ ಈ ತಂಡ ಹುಡುಕಾಟ ನಡೆಸುತ್ತಿದ್ದು, ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.


