Mangalore and Udupi news
ದೇಶ- ವಿದೇಶ

ಪಹಾಲ್ಗಾಂ ಉಗ್ರರ ದಾಳಿಯರಿತು ಮಲಗಿಕೊಂಡು, ತೆವಳಿಕೊಂಡು ಪಾರಾದ ಹರಪನಹಳ್ಳಿಯ ಕುಟುಂಬಸ್ಥರು.

ಬೇಸಿಗೆ ರಜೆ ಕಳೆಯಲು ಜಮ್ಮು-ಕಾಶ್ಮೀರದ ಪಹಲ್ಗಾಂಗೆ ರಾಜ್ಯದ ವಿವಿಧೆಡೆಯಿಂದ ತೆರಳಿದ್ದ ನೂರಾರು ಕನ್ನಡಿಗ ಕುಟುಂಬಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಪಹಲ್ಯಾಂನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಕರ್ನಾಟಕದ ಮೂವರು ಬಲಿಯಾದ ಹಿನ್ನೆಲೆಯಲ್ಲಿ ಫೇಸ್‌ಬುಕ್‌ನಲ್ಲಿ ಲೈವ್ ನೀಡಿ, ತಮ್ಮ ಕುಟುಂಬ ಸುರಕ್ಷಿತವಾಗಿರುವುದಾಗಿ ವಿಜಯಪುರದ ವಕೀಲ ಮಲ್ಲಿಕಾರ್ಜುನ ಶೃಂಗಿಮಠ ಮಾಹಿತಿ ಹಂಚಿಕೊಂಡಿದ್ದಾರೆ. ಇವರು ಕುಟುಂಬ ಸಮೇತ ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದರು. ದಾಳಿ ನಡೆಯುವುದಕ್ಕೂ ಮೂರೂವರೆ ಗಂಟೆಗಳ ಮೊದಲು ಮಂಗಳವಾರ ಬೆಳಗ್ಗೆ 11 ಗಂಟೆಗೆ ಇವರು ಪಹಲ್ಯಾಂನಿಂದ ಹೊರಟಿದ್ದಾರೆ ಎನ್ನಲಾಗಿದೆ.

ಇವರೀಗ ಶ್ರೀನಗರಕ್ಕೆ ಬಂದಿದ್ದು, ಅಲ್ಲಿ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ. ಕಾಶ್ಮೀರಕ್ಕೆ5 ದಿನಗಳ ಪ್ರವಾಸಕೈಗೊಂಡಿರುವ ಚಿಕ್ಕಮಗಳೂರು ನಗರದ ರಾಮೇಶ್ವರ ಬಡಾವಣೆಯ ಒಂದೇ ಕುಟುಂಬದ ಐವರು, ತಾವು ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ. ಕುದುರೆ ಏರಿ ಬೈಸರನ್ ವ್ಯಾಲಿಯತ್ತ ತೆರಳುತ್ತಿದ್ದಾಗ 500 ಮೀ. ಅಂತರದಲ್ಲಿ ದಾಳಿ ನಡೆದ ಸುದ್ದಿ ಕೇಳಿ ವಾಸ್ತವ್ಯಕ್ಕೆ ಹಿಂದಿರುಗಿದ್ದಾರೆ. ಇವರು ತಾಯಿ ಇಂದಿರಮ್ಮ, ಪತ್ನಿ ಲೀಲಾ, ಮಕ್ಕಳಾದ ನಕ್ಷತ್, ಸ್ನೇಹ ಜೊತೆ ಪ್ರವಾಸಕ್ಕೆ ತೆರಳಿದ್ದರು.

ಮತ್ತು ಹರಪನಹಳ್ಳಿಯ ತೆಗ್ಗಿನಮಠ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಡೀನ್ ಆಗಿರುವ ಟಿ.ಎಂ.ರಾಜಶೇಖರ ಅವರು, ಪತ್ನಿ ಟಿ.ಎಂ.ಉಮಾದೇವಿ, ಮಗಳು ಡಾ. ಗೌರಿಕಾ ಹಾಗೂ ಅಳಿಯ ಕೊಟ್ರಬಸಯ್ಯ ಜೊತೆಗೂಡಿ ಏ.18ರಂದು ಕಾಶ್ಮೀರಕ್ಕೆ ತೆರಳಿದ್ದರು.

ಇವರು ಸಮೀಪದ ಹೋಟೆಲ್ ನಿಂದ ಮ್ಯಾಗಿ ಆರ್ಡರ್ ಮಾಡಿ, ಹೊರಗಡೆ ಬೆಂಚ್ ಮೇಲೆ ಕುಳಿತಿದ್ದಾಗ 2.20ಕ್ಕೆ ಇವರಿಂದ 100 ಮೀ. ದೂರದಲ್ಲಿ ಫೈರಿಂಗ್ ಆಗಿದೆ. ಆಗ ಇವರ ಅಳಿಯ ಸೂಕ್ಷ್ಮ ಅರಿತು ನೆಲಕ್ಕೆ ಮಲಗಿ ಎಂದು ಮಲಗಿಸಿದ್ದಾರೆ. ಬಳಿಕ, ಹಾಗೆಯೇ ತೆವಳುತ್ತಾ ಹೋಟೆಲ್ ಮುಂಭಾಗದ ಗೇಟ್ ಹೊರಗಡೆಯಿಂದ ಉರುಳುತ್ತಾ, ಕುಂಟುತ್ತಾ 8 ಕಿಲೋ ಮೀಟರ್ ಕೆಳಗಡೆ ಬಂದು ಜೀವ ಉಳಿಸಿಕೊಂಡಿದ್ದಾರೆ. ಸದ್ಯ ರಾಜರಿಯಲ್ಲಿರುವ ಬಾಗಲಕೋಟೆಯ 13 ಪ್ರವಾಸಿಗರು ಕೂಡ ಸುರಕ್ಷಿತವಾಗಿದ್ದಾರೆ.

ಬಾಗಲಕೋಟೆಯ ಮಾರವಾಡಿ ಗಲ್ಲಿಯ ನಿವಾಸಿಗಳಾಗಿರುವ 4 ದಂಪತಿಗಳು ಹಾಗೂ 5 ಜನ ಮಕ್ಕಳು ಪ್ರವಾಸಕ್ಕೆ ತೆರಳಿದ್ದರು.
ಏ.22ರಂದು ಪಹಲ್ಗಾಂಗೆ ಹೊರಟಿದ್ದರು. ಆದರೆ, ಮಾರ್ಗಮಧ್ಯೆ ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಅದೃಷ್ಟವಶಾತ್ ಪಾರಾಗಿದ್ದಾರೆ. ಈ ಕುಟುಂಬಕ್ಕೆ ಮಂಗಳವಾರ ಮಧ್ಯಾಹ್ನ ಮನೆಯಿಂದ ಕರೆ ಬಂದಿದ್ದು, ಉಗ್ರರ ದಾಳಿ ಬಗ್ಗೆ ಮಾಹಿತಿ ತಿಳಿಯಿತು. ಬಳಿಕ, ಶ್ರೀನಗರ ಬಳಿ ರಾಜೇರಿಗೆ ತೆರಳಿದ್ದು, ಸುರಕ್ಷಿತವಾಗಿದ್ದಾರೆ. ಬ್ರಹ್ಮಾವರದ ಬಿಜೆಪಿ ನಾಯಕ ಬಿರ್ತಿ ರಾಜೇಶ್ ಶೆಟ್ಟಿ ಮತ್ತು ಅವರ ಸ್ನೇಹಿತರು ಸೇರಿ 20 ಜನರ ತಂಡ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದು, ಅವರೆಲ್ಲಾ ಸುರಕ್ಷಿತವಾಗಿದ್ದಾರೆ. ಇವರು ಬುಧವಾರ ಪಹಲ್ಲಾಂಗೆ ತೆರಳಬೇಕಾಗಿತ್ತು. ದಾಳಿ ಹಿನ್ನೆಲೆಯಲ್ಲಿ ಈ ತಂಡ ಶ್ರೀನಗರದಲ್ಲಿ ಉಳಿದುಕೊಂಡಿದ್ದಾರೆ.

ಶಿರಸಿಯ ಮಧುಕೇಶ್ವರ ಹೆಗಡೆ ಮಾಲೀಕತ್ವದ ಓಮಿಟ್ರಾವೆಲ್ಸ್ ಮೂಲಕ ಏ.18ರಂದು ಜಮ್ಮು ಹಾಗೂ ಕಾಶ್ಮೀರಕ್ಕೆ ಪ್ರವಾಸ ಹೋಗಿದ್ದ ಉತ್ತರ ಕನ್ನಡ ಜಿಲ್ಲೆಯ 32 ಪ್ರವಾಸಿಗರು ಕೂಡ ಸುರಕ್ಷಿತವಾಗಿದ್ದಾರೆ. ಇವರೆಲ್ಲಾ ಶಿರಸಿ, ಸಿದ್ದಾಪುರ, ಸಾಗರ ಸುತ್ತಮುತ್ತಲಿನ ಊರಿನವರಾಗಿದ್ದು, ದಾಳಿ ದಿನ ಬೈಸರನ್ ಹುಲ್ಲುಗಾವಲು ಪ್ರದೇಶಕ್ಕಿಂತ ಕೇವಲ ಒಂದು ಕಿ.ಮೀ. ದೂರದಲ್ಲಿದ್ದರು. ಏ.19ರಂದು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದ ಕೊಪ್ಪಳದ 19 ಪ್ರವಾಸಿಗರು ಕೂಡ ಸುರಕ್ಷಿತವಾಗಿದ್ದಾಗಿ ತಿಳಿದುಬಂದಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಶಾ ಸೇರಿ ನಾಲ್ಕು ಕುಟುಂಬಗಳು ಪ್ರವಾಸ ತೆರಳಿದ್ದರು. ಅವರು ಕೂಡ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

Related posts

Leave a Comment