
ಮಂಗಳೂರು: ವೆನ್ಲಾಕ್ಗೆ ಕೇಂದ್ರ ಸರಕಾರದಿಂದ ಸೂಕ್ತ ಅನುದಾನ ಲಭ್ಯವಾಗುತ್ತಿದ್ದು, ರಾಜ್ಯದ ಮುಂಚೂಣಿಯ ಸುಸಜ್ಜಿತ ಸರಕಾರಿ ಆಸ್ಪತ್ರೆಯಾಗಿ ಮಾರ್ಪಾಡಿಸುವುದಕ್ಕೆ ಹೆಚ್ಚಿನ ಚಿಕಿತ್ಸಾ ಸೌಲಭ್ಯ, ಮೂಲಸೌಕರ್ಯ ಒದಗಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮುಂದಿನ ರಾಜ್ಯ ಬಜೆಟ್ನಲ್ಲಿ ವೆನ್ಲಾಕ್ನ್ನು ಪ್ರಾದೇಶಿಕ (ರಿಜನಲ್) ಆಸ್ಪತ್ರೆಯನ್ನಾಗಿ ಘೋಷಿಸಬೇಕು. ಜೊತೆಗೆ ಆಸ್ಪತ್ರೆಗೆ ಮತ್ತಷ್ಟು ಉನ್ನತ ಸ್ಥಾನಮಾನ ಒದಗಿಸಬೇಕು ಎಂದು ಸಂಸದ ಬ್ರಿಜೇಶ್ ಚೌಟ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಮತ್ತಷ್ಟು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಕಲ್ಪಿಸಿದರೆ ವೆನ್ಲಾಕ್ ಮಾದರಿ ಆಸ್ಪತ್ರೆಯಾಗಿ ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ವೆನ್ಲಾಕ್ಗೆ ದ.ಕ., ಉಡುಪಿಯಲ್ಲದೆ ಸುತ್ತಮುತ್ತಲಿನ 7-8 ಜಿಲ್ಲೆಯ ರೋಗಿಗಳು ಚಿಕಿತ್ಸೆಗಾಗಿ ಅವಲಂಬಿಸಿ ಕೊಂಡಿದ್ದಾರೆ. ಆದರೆ ಸಿಬ್ಬಂದಿ ಕೊರತೆ ಸಹಿತ ಕೆಲವು ಸಮಸ್ಯೆಯನ್ನು ಈ ಜಿಲ್ಲಾಸ್ಪತ್ರೆ ಎದುರಿಸುತ್ತಿದೆ. ಅವುಗಳನ್ನು ನಿವಾರಿಸಿ ಸಮಗ್ರ ಅಭಿವೃದ್ದಿ ಮಾಡುವುದಕ್ಕೆ ರಾಜ್ಯ ಸರಕಾರದ ಸಹಕಾರ ಅತ್ಯಗತ್ಯ.
ಪ್ರಾದೇಶಿಕ ಆಸ್ಪತ್ರೆ ಮಾನ್ಯತೆ ನೀಡುವುದರಿಂದ ಹೆಚ್ಚಿನ ಅನುದಾನ, ವೈದ್ಯಕೀಯ ಮೂಲಸೌಕರ್ಯ ಸುಧಾರಿಸುವ ಮೂಲಕ ಹೆಚ್ಚಿನ ಪ್ರದೇಶಕ್ಕೆ ಆರೋಗ್ಯ ಸೇವೆಗಳನ್ನು ವಿಸ್ತರಿಸಲು ಅನುಕೂಲವಾಗುತ್ತದೆ ಎಂದು ಸಂಸದ ಬ್ರಿಜೇಶ್ ಚೌಟ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಡಿಕೇರಿಯಲ್ಲಿ ನೆಲೆಸಿದ್ದ ವಲಸೆ ಕಾರ್ಮಿಕರ ಬಾಲಕನ ಎದೆಗೂಡಿನ ಭಾಗಕ್ಕೆ ಚುಚ್ಚಿಕೊಂಡಿದ್ದ ತೆಂಗಿನ ದಿಂಡು ಹಾಗೂ ಲೋಹದ ಸರವನ್ನು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದು ಪ್ರಾಣ ಉಳಿಸಿದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವೈದ್ಯರ ತಂಡದ ಕಾರ್ಯವೈಖರಿಯನ್ನು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಶ್ಲಾಘಿಸಿದ್ದಾರೆ.