ಇಂದಿನಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಉಪಚುನಾವಣೆಯಲ್ಲಿ ಭರ್ಜರಿ ಗೆಲುವಿನ ಸಂಭ್ರಮದಲ್ಲಿರುವ ರಾಜ್ಯ ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷಗಳು ಸಜ್ಜಾಗಿವೆ.
10 ದಿನಗಳ ಕಾಲ ನಡೆಯಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮುಡಾ, ವಾಲ್ಮೀಕಿ, ಅಬಕಾರಿ, ವಕ್ಫ್, ಬಾಣಂತಿಯರ ಸಾವು ಪ್ರಕರಣಗಳು ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸುವ ಸಾಧ್ಯತೆ ಇದೆ.ವಿಪಕ್ಷಗಳು ಸರ್ಕಾರದ ಮೇಲೆ ಮುಗಿ ಬೀಳಲು ಸಜ್ಜಾಗಿವೆ. ಇನ್ನೊಂದೆಡೆ ವಿಪಕ್ಷಗಳನ್ನು ಕೂಡ ಕಟ್ಟಿ ಹಾಕಲು ಸರ್ಕಾರವೂ ರೆಡಿಯಾಗಿದೆ. ವಿಪಕ್ಷಗಳ ಹಗರಣಗಳನ್ನು ಮುಂದಿಟ್ಟುಕೊಂಡು ಸರ್ಕಾರ ಕೌಂಟರ್ ನೀಡಲು ತಯಾರಾಗಿದೆ.
ಸದನದ ಒಳಗೆ ಆಡಳಿತ ವಿಪಕ್ಷಗಳ ವಾಗ್ಯುದ್ಧ ಒಂದು ಕಡೆಯಾದರೆ ಸದನದ ಹೊರಗಡೆಯೂ ಸಮರ ಜೋರಾಗಿರಲಿದೆ. ಪಂಚಮಸಾಲಿ 2ಎ ಮೀಸಲಾತಿ ಹೋರಾಟ, ರೈತರ ಪ್ರತಿಭಟನೆ ಕೂಡ ನಡೆಯುತ್ತಿದೆ.ಅಧಿವೇಶನದಲ್ಲಿ ಬಿಬಿಎಂಪಿ ವಿಧೇಯಕ, ರಾಜ್ಯಪಾಲರ ಅಧಿಕಾರ ಮೊಟಕು ಮಾಡುವ ಗ್ರಾಮೀಣಾಭಿವೃದ್ಧಿ ವಿವಿ ವಿಧೇಯಕ ಸೇರಿ 15ಕ್ಕೂ ಹೆಚ್ಚು ಮಸೂದೆಗಳು ಮಂಡನೆ ಆಗಲಿವೆ.
ಬಿಜೆಪಿ ಸಿದ್ಧವಾಗಿಟ್ಟುಕೊಂಡಿರುವ ಬಾಣಗಳಿಗೆ ಕಾಂಗ್ರೆಸ್ ನಾಯಕರು ಕೊರೊನಾ ಹಗರಣದ ಪ್ರತ್ಯಸ್ತ್ರ ಸಿದ್ಧ ಮಾಡಿಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ವಕ್ಫ್ ವಿಚಾರ ಮುಂದಿಟ್ಟರೆ, ಯತ್ನಾಳ್ ಪ್ರತ್ಯೇಕ ಹೋರಾಟ ಪ್ರಸ್ತಾಪಿಸಿ ತಿವಿಯುವ ಸಾಧ್ಯತೆ ಇದೆ. ಇದನ್ನರಿತ ಬಿಜೆಪಿ ನಾಯಕರು ಯತ್ನಾಳ್ರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಸದನದಲ್ಲಿ ಹೋರಾಡಲು ಕೌಂಟರ್ ಪ್ಲ್ಯಾನ್ ಮಾಡಿದ್ದಾರೆ. ಇದಕ್ಕೆ ಯತ್ನಾಳ್ ಕೂಡಾ ಜೈ ಎಂದಿದ್ದಾರೆ. ನಮ್ಮ ಆಂತರಿಕ ಜಗಳ ಏನೇ ಇರಲಿ, ರಾಜ್ಯದ ಹಿತಾಸಕ್ತಿಗಾಗಿ ಆರ್ ಅಶೋಕ್ ನೇತೃತ್ವದಲ್ಲೇ ಹೋರಾಟ ಮಾಡುತ್ತೇವೆ ಎಂದಿದ್ದಾರೆ.