Mangalore and Udupi news
ದೇಶ- ವಿದೇಶ

ಹೋಳಿ ವರ್ಷಕ್ಕೊಮ್ಮೆ ಬರುತ್ತೆ, ಆ ದಿನ ಮನೆಯಲ್ಲಿರಿ, ವರ್ಷಕ್ಕೆ ಶುಕ್ರವಾರ 52 ದಿನ ಬರುತ್ತೆ – ಮತ್ತೆ ಗುಡುಗಿದ ಯೋಗಿ ಆದಿತ್ಯನಾಥ್.

ಲಕ್ನೋ: ಹೋಳಿ ಹಬ್ಬದ ಸಮಯದಲ್ಲಿ ಮುಸ್ಲಿಮರು ಮನೆಯೊಳಗೆ ಇರಬೇಕು ಎಂದು ಸೂಚಿಸಿದ್ದ ಸಂಭಾಲ್ ಪೊಲೀಸ್ ಅಧಿಕಾರಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೆಂಬಲಿಸಿದ್ದಾರೆ.

ಈ ವರ್ಷದ ಹೋಳಿ ಹಬ್ಬ ಮಾ.14ರ ಶುಕ್ರವಾರ ಬರುತ್ತದೆ. ಅದೇ ದಿನ ರಂಜಾನ್ ತಿಂಗಳಿನ ಮುಸ್ಲಿಮರ ಪ್ರಾರ್ಥನೆ ಸಹ ಇದೆ. ಹೋಳಿ ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ ಆದರೆ ಶುಕ್ರವಾರ (ನಮಾಜ್‌ಗಾಗಿ) ಒಂದು ವರ್ಷದಲ್ಲಿ 52 ಬಾರಿ ಬರುತ್ತದೆ. ಹೋಳಿ ಆಚರಣೆಗಳು ಕಡಿಮೆಯಾಗುವವರೆಗೆ ಮನೆಯೊಳಗೆ ಇರಬೇಕೆಂದು ನಾನು ಸಲಹೆ ನೀಡುತ್ತೇನೆ ಎಂದು ಶಾಂತಿ ಸಮಿತಿ ಸಭೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಅನುಜ್ ಚೌಧರಿ ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯೋಗಿ ಆದಿತ್ಯನಾಥ್, ಹಬ್ಬಗಳ ಸಮಯದಲ್ಲಿ ನಾವು ಪರಸ್ಪರರ ಭಾವನೆಗಳನ್ನು ಗೌರವಿಸಬೇಕು. ಪ್ರತಿ ಶುಕ್ರವಾರ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ಆದರೆ ಹೋಳಿ ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ. ನಮಾಜ್ ವಿಳಂಬ ಮಾಡಬಹುದು. ನಮಾಜ್‌ಗಾಗಿ ಮಸೀದಿಗೆ ಹೋಗುವುದು ಕಡ್ಡಾಯವಲ್ಲ ಎಂದು ಅವರು ಹೇಳಿದ್ದಾರೆ.

ಇನ್ನೂ ಹೋಳಿ ದಿನ ಶುಕ್ರವಾರದ ನಮಾಜ್‌ನ್ನು ಮಧ್ಯಾಹ್ನ 2 ಗಂಟೆಯ ನಂತರ ನಡೆಸಲು ನಿರ್ಧರಿಸಿದ್ದಕ್ಕಾಗಿ ಧಾರ್ಮಿಕ ನಾಯಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಉತ್ತರ ಪ್ರದೇಶದ ವಿರೋಧ ಪಕ್ಷ ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಸಂಭಾಲ್ ಪೊಲೀಸ್ ಅಧಿಕಾರಿಯ ಹೇಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸರ್ಕಾರದ ಅಧಿಕಾರಿಗಳು ಬಿಜೆಪಿಯ ಏಜೆಂಟ್‌ಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಮಾಜವಾದಿ ಪಕ್ಷದ ಸಂಸದ ಮತ್ತು ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರು ಸಂಭಾಲ್‌ನಲ್ಲಿ ಗಲಭೆಯನ್ನು ರೂಪಿಸಿದವರು ಚೌಧರಿ, ಹಿಂಸಾಚಾರದ ಸಮಯದಲ್ಲಿ ಜನರನ್ನು ಪ್ರಚೋದಿಸಿದ ಪೊಲೀಸರಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ? ಆಡಳಿತ ಬದಲಾದಾಗಲೆಲ್ಲಾ ಅಂತಹವರು ಜೈಲಿನಲ್ಲಿರುತ್ತಾರೆ ಎಂದು ಎಚ್ಚರಿಸಿದ್ದಾರೆ.

ಸಂಭಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪೆನ್ಸಿಯಾ ಅವರಿಂದಲೂ ಡಿಎಸ್ಪಿ ಟೀಕೆಗೆ ಗುರಿಯಾಗಿದ್ದು, ಯಾವುದೇ ಅಧಿಕಾರಿ ತಮ್ಮ ಅಥವಾ ಎಸ್ಪಿ ಅನುಮತಿಯಿಲ್ಲದೆ ಸಾರ್ವಜನಿಕ ಹೇಳಿಕೆಗಳನ್ನು ನೀಡಬಾರದು ಎಂದು ನಿರ್ದೇಶನ ನೀಡಿದ್ದಾರೆ. ಜಿಲ್ಲಾಡಳಿತದ ಪ್ರಮುಖ ಆದ್ಯತೆ ಶಾಂತಿಯನ್ನು ಕಾಪಾಡುವುದು. ಯಾವುದೇ ಅಧಿಕಾರಿ ಯಾವುದೇ ಗುಂಪಿನ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದು ಸೂಚಿಸಿದ್ದಾರೆ.

Related posts

Leave a Comment