
ಮ್ಯಾರಥಾನ್ ಓಟದಲ್ಲಿ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿರುವ ಮುಂಬೈನ ಹೋಟೆಲ್ ಉದ್ಯಮಿ, ಸಮಾಜ ಸೇವಕ ಗಿರೀಶ್ ಶೆಟ್ಟಿ ಹಾಗೂ ರೇಷ್ಮಾ ಜಿ. ಶೆಟ್ಟಿ ದಂಪತಿ ಇದೀಗ ಕರ್ಮಭೂಮಿಯಿಂದ ಜನ್ಮ ಭೂಮಿಗೆ ಓಟ ಆರಂಭಿಸಿದ್ದು, ಈ ಮೂಲಕ ವಿಶ್ವ ದಾಖಲೆ ರಚನೆಗೆ ಸಜ್ಜಾಗಿದ್ದಾರೆ.
ಬಾಲ್ಯದ ಕ್ಯಾನ್ಸರ್ ಗಳ ಚಿಕಿತ್ಸೆಗಾಗಿ ಜಾಗೃತಿ, ಬೆಂಬಲ ಹಾಗೂ ನಿಧಿ ಸಂಗ್ರಹದ ಉದ್ದೇಶದಿಂದ ಜನಜಾಗೃತಿ ಓಟವನ್ನು ಆಯೋಜಿಸಲಾಗಿದೆ. ಫೆ.14 ರ ಶುಕ್ರವಾರ ಬೆಳಗ್ಗೆ 5.30 ಕ್ಕೆ ಮುಲುಂಡ್ನಲ್ಲಿರುವ ಫೋರ್ಟಿಸ್ ಆಸ್ಪತ್ರೆ ಬಳಿಯಿಂದ ಓಟ ಪ್ರಾರಂಭಿಸಿ 7.30 ಕ್ಕೆ ನೆರುಲ್ ಹೆದ್ದಾರಿಯಲ್ಲಿ ಸಾರ್ವಜನಿಕರಿಂದ ಅಭಿನಂದನೆಯನ್ನು ಸ್ವೀಕರಿಸಿದ್ದು, ಓಟ ಮುಂದುವರಿಸಿದ್ದಾರೆ. ಮುಂಬೈಯಿಂದ ಮಂಗಳೂರಿನವರೆಗೆ ಸುಮಾರು 950 ಕಿ.ಮೀ ಓಟವನ್ನು ಪೂರೈಸುವ ಪ್ರಪ್ರಥಮ ದಂಪತಿ ಎಂಬ ಹೆಗ್ಗಳಿಕೆಗೆ ಗಿರೀಶ್ ಶೆಟ್ಟಿ ಮತ್ತು ರೇಷ್ಮಾ ಶೆಟ್ಟಿ ದಂಪತಿ ಭಾಜನರಾಗಲಿದ್ದಾರೆ.
ಮಕ್ಕಳ ಕ್ಯಾನ್ಸರ್ ಆಸ್ಪತ್ರೆಗೆ ನಿಧಿ ಸಂಗ್ರಹದ ಸದುದ್ದೇಶದಿಂದ ಕರ್ಮಭೂಮಿಯಿಂದ ಜನ್ಮ ಭೂಮಿಗೆ ಓಟ ಎಂಬ ಶೀರ್ಷಿಕೆ ಅಡಿಯಲ್ಲಿ ಓಡುವ ಈ ಓಟದ ಪ್ರಾಯೋಜಕತ್ವವನ್ನು IDFC ಫಸ್ಟ್ ಬ್ಯಾಂಕ್ ವಹಿಸಿ ಕೊಂಡಿದ್ದು, ತುಳು ಕನ್ನಡ ಸಂಘ ಸಂಸ್ಥೆಗಳು ದಾರಿಯುದ್ದಕ್ಕೂ ಪ್ರೋತ್ಸಾಹಿಸುವರೆಂಬ ನಿರೀಕ್ಷೆಯನ್ನು ಗಿರೀಶ್ ಹಾಗೂ ರೇಷ್ಮಾ ಶೆಟ್ಟಿ ದಂಪತಿ ಹೊಂದಿದ್ದಾರೆ. ತಪಸ್ಯ ಫೌಂಡೇಶನ್ ಮಂಗಳೂರು ಇದರ ಕ್ಯಾನ್ಸರ್ ಆಸ್ಪತ್ರೆ ನಿಧಿ ಸಹಾಯಾರ್ಥವಾಗಿ ಓಟ ನಡೆಯಲಿದೆ. ಇವರೊಂದಿಗೆ ತರಬೇತುದಾರರಾದ ಕುಮಾರ್ ಅಜ್ವಾನಿ ಹಾಗೂ ಹರಿದಾಸನ್ ನಾಯರ್ ಜೊತೆಗಿರಲಿದ್ದಾರೆ.
ಪ್ರತಿ ದಿನ 6 ಗಂಟೆ ಓಡುವುದರ ಮೂಲಕ 23 ದಿನಗಳಲ್ಲಿ ಮಂಗಳೂರು ತಲುಪಲಿರುವ ಈ ದಂಪತಿ ಮಂಗಳೂರು ಪುರಭವನ ಅವರಣದಲ್ಲಿ ಮಾ.8 ರಂದು ಭರ್ಜರಿ ಸ್ವಾಗತದೊಂದಿಗೆ ಅಭಿನಂದಿಸಲಾಗುವುದು. ಗಿರೀಶ್ ಶೆಟ್ಟಿ ಮತ್ತು ರೇಷ್ಮಾ ಶೆಟ್ಟಿ ದಂಪತಿಯ ಈ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿಯಾಗಲಿ ಎಂದು ಅಭಿನಂದನೆಗಳು ಹರಿದುಬರುತ್ತಿದೆ.