ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಬಾರಿಗೆ ಮೂವರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.
ಎ15 ಕಾರ್ತಿಕ್ ,ಎ16 ಕೇಶವಮೂರ್ತಿ, ಎ17 ನಿಖಿಲ್ ನಾಯ್ಕ್, ಈ ಮೂವರಿಗೆ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ. ಬರೋಬ್ಬರಿ ತಿಂಗಳ ಬಳಿಕ ಈ ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ. ಈ ಮೂವರು ಕೂಡ ಪೊಲೀಸ್ ಠಾಣೆಗೆ ಶರಣಾಗಲು ಹೋದವರಾಗಿದ್ದಾರೆ.

ಈ ಪ್ರಕರಣದ 16ನೇ ಆರೋಪಿಯಾಗಿರುವ ಬೆಂಗಳೂರು ಮೂಲದ ಹೀರಣ್ಣನ ಗುಡ್ಡದ ಕೇಶವಮೂರ್ತಿಗೆ ಹೈಕೋರ್ಟ್ ನಿಂದ ಜಾಮೀನು ಮಂಜೂರು ಆಗಿದ್ದು, ನ್ಯಾ.ವಿಶ್ವಜಿತ್ ಶೆಟ್ಟಿ ಅವರಿಂದ ಷರತ್ತುಬದ್ಧ ಜಾಮೀನು ಮಂಜೂರು ಆಗಿದೆ.
ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ, ಒಬ್ಬರ ವೈಯಕ್ತಿಕ ಶ್ಯೂರಿಟಿ ನೀಡುವಂತೆ, ಆರೋಪಿ ಪರ ವಕೀಲ ರಂಗನಾಥ್ ರೆಡ್ಡಿ ವಾದಿಸಿದ್ರು. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಳಿಕ ಶರಣಾಗತಿಗೆ ತೆರಳಿದ್ದವರಲ್ಲಿ ಕೇಶವಮೂರ್ತಿ ಕೂಡ ಓರ್ವನಾಗಿದ್ದಾನೆ.

ಇನ್ನು ಈ ಪ್ರಕರಣದಲ್ಲಿ ಎ15 ಕಾರ್ತಿಕ್ ಮತ್ತು ಎ17 ನಿಖಿಲ್ ನಾಯ್ಕ್ ಗೆ 57ನೇ ಸೆಷನ್ಸ್ ಕೋರ್ಟ್ ನಿಂದ ಷರತ್ತುಬದ್ಧ ಜಾಮೀನು ಸಿಕ್ಕಿದೆ. ನ್ಯಾ.ಜೈಶಂಕರ್ ಅವರಿಂದ ಜಾಮೀನು ನೀಡಿ ಆದೇಶ ಹೊರಡಿಲಾಗಿದೆ.
ದರ್ಶನ್ ಆಪ್ತರ ಸೂಚನೆ ಮೇರೆಗೆ ತಾವೇ ಹಣಕಾಸು ವಿಚಾರವಾಗಿ ರೇಣುಕಾಸ್ವಾಮಿಯನ್ನು ಕೊಂದಿದ್ದಾಗಿ ಹೇಳಿ ಚಿತ್ರದುರ್ಗದ ರಾಘವೇಂದ್ರ, ಗಿರಿನಗರದ ಕೇಶವಮೂರ್ತಿ, ನಿಖಿಲ್ ನಾಯ್ಕ್ ಹಾಗೂ ಕಾರ್ತಿಕ್ ಶರಣಾಗಿದ್ದರು. ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಶರಣಾಗಿದ್ದ ನಾಲ್ವರ ಪೈಕಿ ಕೇಶವಮೂರ್ತಿ, ನಿಖಿಲ್ ನಾಯಕ್ ಹಾಗೂ ಕಾರ್ತಿಕ್ ಅಲಿಯಾಸ್ ಕಪ್ಪೆ ಮೇಲೆ ಸಾಕ್ಷ್ಯ ನಾಶ ಆರೋಪ ಹೊರಿಸಲಾಗಿದೆ.

ಪಟ್ಟಣಗೆರೆ ಶೆಡ್ನಿಂದ ಮೃತದೇಹವನ್ನು ಸಾಗಿಸಲು ಕೂಡ ಈ ಮೂವರು ನೆರವಾಗಿದ್ದರು. ಆದರೆ ಈ ನಾಲ್ವರ ವಿಚಾರಣೆ ವೇಳೆ ಹತ್ಯೆ ಹಿಂದಿರುವ ದರ್ಶನ್ ಹಾಗೂ ಅವರ ಆಪ್ತೆ ಪವಿತ್ರಾಗೌಡ ಪಾತ್ರ ಬಯಲಾಯಿತು. ಈ ಮಾಹಿತಿ ಮೇರೆಗೆ ಜೂ.11 ರಂದು ದರ್ಶನ್ ಸೇರಿ 17 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.
ಈ ಪ್ರಕರಣ ಮುಚ್ಚಿ ಹಾಕಲು ಆರೋಪಿಗಳಾದ ವಿನಯ್, ನಾಗರಾಜ್, ಲಕ್ಷ್ಮಣ್ ಮುಖಾಂತರ 30 ಲಕ್ಷ ಡೀಲ್ ಕುದುರಿಸಲಾಗಿತ್ತು. ಹಣಕಾಸು ವಿಚಾರಕ್ಕೆ ಕೊಲೆ ನಡೆದಿದೆ ಎಂಬ ಕಾರಣ ಹೇಳಿ ಪೊಲೀಸರ ಮುಂದೆ ಸರೆಂಡರ್ ಆಗಲು ತಿಳಿಸಲಾಗಿತ್ತು. ಒಬ್ಬೊಬ್ಬರಿಗೆ ತಲಾ 5 ಲಕ್ಷ ನೀಡುವಂತೆ ತಿಳಿಸಲಾಗಿತ್ತು.
ಬೇಲ್ ಖರ್ಚನ್ನೂ ನೋಡಿಕೊಳ್ಳುವ ಬಗ್ಗೆ ಭರವಸೆ ನೀಡಲಾಗಿತ್ತು. ಆದರೆ ಪೊಲೀಸ್ ಠಾಣೆಗೆ ಹೋದ ಬಳಿಕ ಪೊಲೀಸರು ಬಾಯಿ ಬಿಡಿಸಿದಾಗ ಕೊಲೆಯಲ್ಲಿ ದರ್ಶನ್ ಲಿಂಕ್ ಇರುವುದು ಪೊಲೀಸರಿಗೆ ತಿಳಿಯಿತು.
ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 14 ಮಂದಿ ವಿರುದ್ಧ ಕೊಲೆ ಮತ್ತು ಅಪಹರಣ ಹಾಗೂ ಕೇಶವ, ಕಾರ್ತಿಕ್, ಕಪ್ಪೆ ವಿರುದ್ಧ ಸಾಕ್ಷ್ಯ ನಾಶ ಆರೋಪವನ್ನು ಆರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

