ದಕ್ಷಿಣ ಕನ್ನಡದಲ್ಲಿ ಮತ್ತೆ ಕಳ್ಳರ ಹಾವಳಿ ಜಾಸ್ತಿಯಾಗಿದೆ. ಕರಾವಳಿಯ ಧಾರ್ಮಿಕ ಕ್ಷೇತ್ರಗಳಿಂದ ಕಳ್ಳತನ ನಡೆಯುತ್ತಿದೆ. ಆದರೆ ಶಕ್ತಿಗಳು ತೋರುವ ಕಾರ್ಣಿಕ ನಿಜಕ್ಕೂ ಪ್ರತಿಯೊಬ್ಬರನ್ನು ಆಶ್ಚರ್ಯಪಡುವಂತೆ ಮಾಡುತ್ತದೆ. ಕಳ್ಳನೊಬ್ಬ ದೇಗುಲದ ಸೊತ್ತು ಕದ್ದು ಪರಾರಿಯಾಗುವ ಬದಲು ದೇವಸ್ಥಾನದ ಸುತ್ತವೇ ಅಲೆದಾಡುತ್ತಿದ್ದು ದೇವರ ಕಾರ್ಣಿಕದ ಸಂಗತಿ ಸುದ್ದಿಯಾಗುತ್ತಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟ ಸ್ಥಳೀಯ ಅಭಯ ಆಂಜನೇಯ ಗುಡಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ.
ಗುಡಿಯ ಅರ್ಚಕರು ನ. 3ರಂದು ರಾತ್ರಿ ಬಾಗಿಲು ಹಾಕಿ ತೆರಳಿದ್ದು, ನ. 4ರಂದು ಬೆಳಗ್ಗೆ ಬಂದು ನೋಡಿದಾಗ ಕಳ್ಳರು ನುಗ್ಗಿ ದೇವಸ್ಥಾನದಲ್ಲಿದ್ದ ಪೂಜೆ ಸಾಮಗ್ರಿಗಳು,ಸಿಸಿ ಕೆಮರಾದ ಸೊತ್ತುಗಳು ಕಳ್ಳತನ ಆಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದರು.
ಕಳವಾಗಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾದ 24 ಗಂಟೆಯೊಳಗೆ ಕಳ್ಳನನ್ನು ಬಂಧಿಸಿದ್ದಾರೆ. ಧಾರವಾಡ ಮೂಲದ ವೀರಣ್ಣ ಗೌಡ (26ವ) ಬಂಧಿತ ಆರೋಪಿ.
ದೇಗುಲದ ಪಾರ್ಕಿಂಗ್ ಜಾಗದಲ್ಲಿ ಸುತ್ತಾಡುತ್ತಿದ್ದ ಈತನನ್ನು ಎಸ್.ಐ ಕಾರ್ತಿಕ್.ಕೆ ನೇತೃತ್ವದ ಪೊಲೀಸರ ತಂಡ ಪತ್ತೆ ಹಚ್ಚಿದ್ದಾರೆ. ಜಾಗವೊಂದರ ಬಳಿ ಮೂಟೆ ಕಟ್ಟಿರುವುದು ಕಂಡು ಬಂದಿದ್ದು, ಸುಮಾರು 15 ಸಾವಿರಕ್ಕೂ ಹೆಚ್ಚು ಮೊತ್ತದ ಬೆಲೆಬಾಳುವ ಗಂಟೆ, ಕಾಲುದೀಪ, ತಟ್ಟೆ, ತೂಗುದೀಪ, ಸಿಸಿ ಕೆಮರಾ ಸ್ವಿಚ್ ಸೇರಿದಂತೆ ಕಳ್ಳತನ ಮಾಡಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.