
ಮಹಾಶಿವರಾತ್ರಿಯ ಸಂದರ್ಭದಲ್ಲಿ ಗುಜರಾತ್ನ ದ್ವಾರಕಾದ ದೇವಸ್ಥಾನದಿಂದ ಶಿವಲಿಂಗವನ್ನು ಕದ್ದು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿದ ಆರೋಪದ ಮೇಲೆ ಕುಟುಂಬದ ಎಂಟು ಸದಸ್ಯರನ್ನು ಬಂಧಿಸಲಾಗಿದೆ. ಬಾಲಕಿಯೊಬ್ಬಳಿಗೆ ಶಿವಲಿಂಗದ ಕನಸು ಬಿದ್ದ ನಂತರ ಕುಟುಂಬದವರು ದೇವಸ್ಥಾನಕ್ಕೆ ಹೋಗಿ ಶಿವಲಿಂಗ ಕದ್ದಿದ್ದರು.
ದ್ವಾರಕಾದಲ್ಲಿರುವ ಪ್ರಾಚೀನ ಭೀದ್ಭಂಜನ್ ಮಹಾದೇವ್ ದೇವಾಲಯದಿಂದ ಶಿವಲಿಂಗವನ್ನು ಕದ್ದಿದ್ದರು, ಅಧಿಕಾರಿಗಳು ಆರಂಭದಲ್ಲಿ ಅದನ್ನು ಸಮುದ್ರಕ್ಕೆ ಎಸೆದಿದ್ದಾರೆ ಎಂದು ಶಂಕಿಸಿದ್ದರು. ದ್ವಾರಕಾದಿಂದ 500 ಕಿಲೋಮೀಟರ್ ದೂರದಲ್ಲಿರುವ ಸಬರ್ಕಾಂತ ಜಿಲ್ಲೆಯ ಹಿಮ್ಮತ್ನಗರದ ಕುಟುಂಬವೊಂದು ಅದನ್ನು ಕದ್ದಿರುವುದು ಬಳಿಕ ತಿಳಿದುಬಂದಿತ್ತು.
ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಕುಟುಂಬದ ಒಬ್ಬ ಹುಡುಗಿ ಕನಸಿನಲ್ಲಿ ಕಾಣಿಸಿಕೊಂಡ ಭೀದ್ಭಂಜನ್ ಮಹಾದೇವ್ ದೇವಸ್ಥಾನದ ಶಿವಲಿಂಗವನ್ನು ಮನೆಗೆ ತಂದು ಪ್ರತಿಷ್ಠಾಪಿಸುವುದರಿಂದ ಅವರ ಸಮಸ್ಯೆಗಳು ಕೊನೆಗೊಂಡು ಸಮೃದ್ಧಿ ತರುತ್ತದೆ ಎಂದು ನಂಬಿದ್ದರು ಎಂಬುದು ಪೊಲೀಸರಿಗೆ ಬಳಿಕ ತಿಳಿಯಿತು.
ಮಹೇಂದ್ರ ಮಕ್ವಾನಾ ಅವರ ಸೊಸೆಯ ಕನಸಿನಲ್ಲಿ ಶಿವಲಿಂಗ ಕಾಣಿಸಿಕೊಂಡಿತ್ತು, ಕುಟುಂಬದ ಏಳರಿಂದ ಎಂಟು ಸದಸ್ಯರು ದ್ವಾರಕೆಗೆ ಪ್ರಯಾಣ ಬೆಳೆಸಿ ಕೆಲವು ದಿನಗಳ ಕಾಲ ಅಲ್ಲಿಯೇ ಇದ್ದರು. ಅವರು ದೇವಾಲಯದ ಪೂಜೆಯನ್ನು ನಡೆಸಿದರು ಮತ್ತು ಶಿವಲಿಂಗವನ್ನು ಕದ್ದ ನಂತರ, ಮನೆಗೆ ಹಿಂತಿರುಗಿ ಮಹಾಶಿವರಾತ್ರಿಯಂದು ಅದನ್ನು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿದರು.
ನಾವು ಎಂಟು ಆರೋಪಿಗಳನ್ನೂ ಬಂಧಿಸಿದ್ದೇವೆ. ಮಹೇಂದ್ರನ ಸೊಸೆ ಹರ್ಷದ ಭೀದ್ಭಂಜನ್ ಮಹಾದೇವನ ಶಿವಲಿಂಗವನ್ನು ತಮ್ಮ ಮನೆಯಲ್ಲಿ ಸ್ಥಾಪಿಸಿದರೆ, ಅದು ಅದೃಷ್ಟವನ್ನು ತರುತ್ತದೆ ಮತ್ತು ಕುಟುಂಬವು ಪ್ರಗತಿ ಹೊಂದುತ್ತದೆ ಎಂಬುದಾಗಿ ಕನಸು ಕಂಡಿದ್ದಳು. ಕುಟುಂಬದ ಎಲ್ಲಾ ಸದಸ್ಯರು ಒಟ್ಟಾಗಿ ಒಂದು ಯೋಜನೆಯನ್ನು ರೂಪಿಸಿ ಅದನ್ನು ಕಾರ್ಯಗತಗೊಳಿಸಿದರು ಎಂದು ದ್ವಾರಕಾ ಎಸ್ಪಿ ನಿತೀಶ್ ಪಾಂಡೆ ಹೇಳಿದರು.
ಕುಟುಂಬದ ಮೂವರು ಮಹಿಳೆಯರ ಜೊತೆಗೆ ವನರಾಜ್, ಮನೋಜ್ ಮತ್ತು ಜಗತ್ ಎಂದು ಗುರುತಿಸಲಾದ ಇತರ ಆರೋಪಿಗಳನ್ನು ಸಹ ಬಂಧಿಸಲಾಗಿದೆ ಎಂದು ಅವರು ಹೇಳಿದರು. ಕದ್ದ ಶಿವಲಿಂಗವನ್ನು ಪೊಲೀಸರು ವಶಪಡಿಸಿಕೊಂಡು ದ್ವಾರಕಾದ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾಪಿಸಿದರು.