
ಸುಳ್ಯ: ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಪತ್ನಿ ಕೋವಿ ಗುಂಡಿಗೆ ಬಲಿಯಾದರೆ, ಪತಿ ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ಜ. 17 ಶುಕ್ರವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ.
ಕ್ಷುಲ್ಲಕ ಕಾರಣಕ್ಕೆ ಮನೆಯಲ್ಲಿ ಜಗಳ ನಡೆದಿದೆ. ಕೋಡಿಮಜಲು ನಿವಾಸಿ, ರಾಮಚಂದ್ರ ಗೌಡ ಅಲಿಯಾಸ್ ಚಂದ್ರ(53) ಕೊಲೆ ಕೃತ್ಯ ಎಸಗಿ ಆತ್ಮಹತ್ಯೆ ಮಾಡಿಕೊಂಡವರು. ಅವರ ಪತ್ನಿ ವಿನೋದಾ(43) ಕೊಲೆಯಾದವರು. ಆರೋಪಿಯು ಪರವಾನಿಗೆ ಹೊಂದಿರುವ ತನ್ನದೇ ಕೋವಿಯಲ್ಲಿ ಕೃತ್ಯ ಎಸಗಿದ್ದಾಗಿ ತಿಳಿದುಬಂದಿದೆ.
ಘಟನೆಯ ವಿವರ: ರಾಮಚಂದ್ರ ಗೌಡ ರಾತ್ರಿ ಊಟ ಮಾಡಿದ ಬಳಿಕ ಕ್ಷುಲ್ಲಕ ಕಾರಣ ಮುಂದಿಟ್ಟು ಮನೆಯಲ್ಲಿ ಜಗಳ ಆರಂಭಿಸಿದ್ದಾನೆ. ಬಳಿಕ ಗಲಾಟೆ ವಿಪರೀತಕ್ಕೆ ತಿರುಗಿದೆ. ರಾಮಚಂದ್ರ ಕೋವಿಯಿಂದ ಹಿರಿಯ ಮಗ ಪ್ರಶಾಂತ್ ಗೆ ಗುರಿಯಿಟ್ಟಿದ್ದನೆನ್ನಲಾಗಿದೆ. ಈ ವೇಳೆ ಮಧ್ಯಪ್ರವೇಶಿಸಿದ ಪತ್ನಿ ವಿನೋದಾ ಕೋವಿಯನ್ನು ಎಳೆದುಕೊಳ್ಳಲು ಪ್ರಯತ್ನಿಸಿದ್ದಾರೆ.
ಇದರಿಂದ ಪತ್ನಿಯ ಮೇಲೆ ಕೋಪಗೊಂಡ ಆರೋಪಿ ರಾಮಚಂದ್ರ ಕೋವಿಯಿಂದ ಪತ್ನಿಗೆ ಗುಂಡಿಕ್ಕಿದ್ದಾನೆ. ಇದರಿಂದ ವಿನೋದಾ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಪತ್ನಿ ಮೃತಪಟ್ಟ ಬಳಿಕ ರಾಮಚಂದ್ರ ರಬ್ಬರ್ ಶೀಟ್ ಮಾಡಲು ಬಳಸುವ ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ. ಈ ಕುರಿತಂತೆ ಪ್ರಶಾಂತ್ ಹೇಳಿಕೆಯಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.