ಪುತ್ತೂರಿನಲ್ಲಿ ಇದೀಗ ಕಾಂಗ್ರೇಸ್ ಶಾಸಕ ಗೂಂಡಾ ರಾಜಕಾರಣ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಆರೋಪಿಸಿದ್ದಾರೆ. ಮಹಾಲಿಂಗೇಶ್ವರದ ದೇವಾಲಯದ ಆವರಣದಲ್ಲಿರುವ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಅವರ ಮನೆ ಧ್ವಂಸ ವಿಚಾರಕ್ಕೆ ಸಂಬಂಧಿಸಿದಂತೆಮಾಧ್ಯಮಗಳ ಜೊತೆ ಮಾತನಾಡಿದ ಅವರು ಪುತ್ತೂರಿನಲ್ಲಿ ಮತ್ತೆ ಇತಿಹಾಸ ಮರುಕಳಿಸುತ್ತಿದೆ, ಕಳೆದ 20 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಗೂಂಡಾ ರಾಜಕಾರಣವಿತ್ತು, ಆದರೆ ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕ ಗೂಂಡಾ ರಾಜಕಾರಣ ಆರಂಭಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ವಿಚಾರಕ್ಕೆ ಬಿಜೆಪಿ ಯಾವತ್ತಿಗೂ ಅಡ್ಡ ಬರಲ್ಲ, ಆದ್ರೆ ಇವರು ನಡೆದುಕೊಂಡ ರೀತಿ ಸರಿಯಿಲ್ಲ, ರಾಜೇಶ್ ಬನ್ನೂರು ಅವರ ಮನೆಯನ್ನ ಅಕ್ರಮವಾಗಿ ಧ್ವಂಸ ಮಾಡಿದ್ದಾರೆ. ಮುಸುಕುಧಾರಿಗಳು ರಾಜೇಶ್ ಬನ್ನೂರನ್ನ ಬಲವಂತವಾಗಿ ಹಿಡಿದುಕೊಂಡ ಮನೆಯನ್ನ ಧ್ವಂಸ ಮಾಡಿದ್ದಾರೆ. ಅಲ್ಲದೇ ಈ ವೇಳೆ ಸುಮಾರು ನಾಲ್ಕು ನಾಯಿ ಮರಿಯನ್ನ ಮಣ್ಣಿನಡಿ ಹಾಕಿ ಸಾಯಿಸಿದ್ದಾರೆ ಎಂದು ಆರೋಪಿಸಿದರು. ಶಾಸಕ ಅಶೋಕ್ ರೈ ಅವರು ಮಾನವೀಯತೆ ಇಲ್ಲದ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಅಂತ ಗೊತ್ತಿರಲಿಲ್ಲ, ಅಶೋಕ್ ರೈ ಅವರ ಮೇಲಿದ್ದ ಗೌರವ ಇಂದಿಗೆ ಮುಗಿದು ಹೋಯಿತು ಎಂದರು.
ಯಾರು ಅಕ್ರಮವಾಗಿ ಮನೆಯನ್ನ ಧ್ವಂಸ ಮಾಡಿದ್ದಾರೋ ಅವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು, ಬಿಜೆಪಿ ಕಾರ್ಯಕರ್ತರು ಸುಖಾಸುಮ್ಮನೇ ಕೂರಲ್ಲ. ಅಶೋಕ್ ರೈಗಳು ಹೇಳ್ತಾರೆ ದೇವರ ಭಕ್ತರು ಮನೆ ಧ್ವಂಸ ಮಾಡಿದ್ದು ಅಂತಾ, ದೇವರು ಭಕ್ತರು, ದೇವರನ್ನ ನಂಬವವರು ಮನೆ ಧ್ವಂಸ ಮಾಡಲೂ ಸಾಧ್ಯವೇ ಇಲ್ಲ, ಅಶೋಕ್ ರೈಗಳೇ ನಿಮ್ಮ ಮನೆಯ ಪಕ್ಕ ಹೆದ್ದಾರಿ ಕಾಮಗಾರಿ ಆಗುವಾಗ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ರಿ, ಅಲ್ಲದೆ ನ್ಯಾಯಾಲಯದಲ್ಲಿ ಕಾಮಗಾರಿಗೆ ತಡೆ ಹಿಡಿದು, ಪ್ರಕರಣವನ್ನು ದಾಖಲಿಸಿದ್ರಿ, ಆದರೆ ಇದೇನು ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆನಾ ಎಂದು ಕಿಶೋರ್ ಪ್ರಶ್ನಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಮಾಡಿದ ಕೆಲಸವನ್ನ ಅಶೋಕ್ ರೈ ಮಾಡಿದ್ದು ಅಂತ ಹೇಳುತ್ತಾ ತಿರುಗಾಡುತ್ತೀರಿ, ವೇದಿಕೆಯಲ್ಲಿ ಬೇಕಾಬಿಟ್ಟಿ ಮಾತಾಡ್ತೀರಿ, ಅಶೋಕ್ ರೈಗಳೇ ನಿಮಗೆ ಏನಾಗಿದೆ? ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ ಅಶೋಕ್ ರೈಗಳು ಸರಿಯಾಗಲಿ , ನಿಮ್ಮ ಹಿಂದಿನವರಿಗೆ ಬುದ್ಧಿ ಕಲಿಸಿದ್ದೇವೆ, ನಿಮಗೆ ಬುದ್ದಿ ಕಲಿಸಲು ನಮಗೆ ಸಾಧ್ಯವಿಲ್ಲವೇ? , ನಿಮ್ಮ ಗೂಂಡಾ ವರ್ತನೆಯನ್ನ ಖಂಡಿತ ಬಿಡೋದಿಲ್ಲ ಎಂದು ಎಚ್ಚರಿಸಿದರು. ಅಶೋಕ್ ರೈಗಳೇ ಮನೆ ಧ್ವಂಸ ಮಾಡಿರೋದು ನೀವೇ, ಅಶೋಕ್ ರೈಗಳೇ ನಿಮಗೆ ಧಿಕ್ಕಾರವಿರಲಿ ಎಂದು ಪುತ್ತೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಪುತ್ತೂರು ಹೇಳಿದ್ದಾರೆ.