
ಕಲ್ಲಡ್ಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವರಿಷ್ಠರಾಗಿರುವ ಸರಸಂಘ ಚಾಲಕ ಡಾ. ಮೋಹನ್ ಭಾಗವತ್ ಅವರು ಡಿ. 7 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದು ಬಂಟ್ವಾಳ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆಯಲಿರುವ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಈ ಮಾಹಿತಿ ನೀಡಿದ್ದಾರೆ. ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಪದವಿ ಕಾಲೇಜು, ಸೆಕೆಂಡರಿ ಸ್ಕೂಲ್, ಪದವಿ ಪೂರ್ವ ಕಾಲೇಜು, ಹೈಸ್ಕೂಲ್ ಹಾಗೂ ಪ್ರಾಥಮಿಕ ಶಾಲೆ ಜತೆಗೆ ಶಿಶುಮಂದಿರವಿದ್ದು, 3,338 ವಿದ್ಯಾರ್ಥಿಗಳು ಹಾಗೂ 230 ಶಿಕ್ಷಕರು, ಸಿಬ್ಬಂದಿ ಇದ್ದಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸದ ಜತೆ ದೇಶಭಕ್ತಿ, ಸಂಸ್ಕೃತಿಯನ್ನು ಮೂಡಿಸುವುದು ಹಾಗೂ ರಾಷ್ಟ್ರೀಯ ದೃಷ್ಟಿಕೋನದ ಶಿಕ್ಷಣವನ್ನು – ಕಳೆದ ನಾಲ್ಕು ದಶಕಗಳಿಂದ ನೀಡುತ್ತಿದ್ದೇವೆ. ಮೂರೂವರೆ ದಶಕಗಳಿಂದ ನಡೆಸುತ್ತಿರುವ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಎಲ್ಲ ವಿದ್ಯಾರ್ಥಿಗಳೂ ಪಾಲ್ಗೊಳ್ಳುತ್ತಾರೆ. ಈ ಬಾರಿ 20 ವಿಶೇಷ ಚೇತನ ವಿದ್ಯಾರ್ಥಿಗಳೂ ಭಾಗವಹಿಸಲಿದ್ದಾರೆ.
ಪ್ರತಿ ಬಾರಿಯೂ ರಾಜ್ಯ, ರಾಷ್ಟ್ರಮಟ್ಟದ ಗಣ್ಯರು ಆಗಮಿಸುವುದು ಇಲ್ಲಿನ ವಿಶೇಷವಾಗಿದೆ. ಈ ಬಾರಿ ಆರೆಸ್ಸೆಸ್ ಸರಸಂಘಚಾಲಕರು ಕಲ್ಲಡ್ಕಕ್ಕೆ ಗ ಭೇಟಿ ನೀಡಲಿದ್ದಾರೆ. ಸಂಜೆ 6.30ಕ್ಕೆ ಕ್ರೀಡೋತ್ಸವ ಪ್ರಾರಂಭವಾಗಿ 8 ಗಂಟೆಗೆ ಮುಕ್ತಾಯಗೊಳ್ಳಲಿದೆ. ಬಳಿಕ ಡಾ.ಭಾಗವತ್ ಸಂದೇಶ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಪದವಿ ವಿಭಾಗದ ಪ್ರಿನ್ಸಿಪಾಲ್ ಕೃಷ್ಣಪ್ರಸಾದ್ ಕಾಯರಕಟ್ಟೆ, ಪಟ್ಟಾಭಿರಾಮ ಟ್ರಸ್ಟ್ ಪ್ರಮುಖ, ನ್ಯಾಯವಾದಿ ಪ್ರಸಾದ್ ಕುಮಾರ್, ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮೀ ರಘುರಾಜ್ ಮತ್ತು ಅಕ್ಷತಾ ಕಾವೂರು ಉಪಸ್ಥಿತರಿದ್ದರು.