
ಕುಂದಾಪುರ : ಡಿ.21 ಶನಿವಾರ ಸಂಜೆ ತ್ರಾಸಿ ಬೀಚ್ ಸಮುದ್ರ ತೀರದಲ್ಲಿ ಸಮುದ್ರದಲ್ಲಿ ನಾಪತ್ತೆ ಆಗಿದ್ದ ಜಾಸ್ಕಿ ರೈಡರ್ ಶವ 36 ಗಂಟೆಗಳ ಬಳಿಕ ಸಮೀಪದ ಹೊಸಪೇಟೆ ರುದ್ರ ಭೂಮಿಯ ಹಿಂಭಾಗದ ಸಮುದ್ರ ತೀರದಲ್ಲಿ ಪತ್ತೆ ಆಗಿದೆ.
ಮೃತರನ್ನು ಜೆಟ್ ಸ್ಕೀ ರೈಡರ್ ರೋಹಿದಾಸ್ ಯಾನೆ ರವಿ (41) ಎಂದು ಗುರುತಿಸಲಾಗಿದೆ.
ಸ್ಥಳೀಯ ಮೀನುಗಾರರಾದ ಶಾಸ ಖಾರ್ವಿ ಹಾಗು ಮೋಹನ ಖಾರ್ವಿ ಇವರು ಡಿ.23 ಇಂದು ಬೆಳಿಗ್ಗೆ 3 ಗಂಟೆ ಸುಮಾರಿಗೆ ಮೀನುಗಾರಿಕೆ ತೆರಳಲು ಹೋಗುತ್ತಿದ್ದಾಗ ಶವ ತೇಲುತ್ತಿರುವುದನ್ನು ಗಮನಿಸಿದ್ದಾರೆ. ಸ್ಥಳೀಯ ಕರಾವಳಿ ಕಾವಲು ಪಡೆಯ ಕರಾವಳಿ ನಿಯಂತ್ರಣ ದಳದ ಸಿಬ್ಬಂದಿ ನಿಶಾಂತ್ ಖಾರ್ವಿಗೆ ಮಾಹಿತಿ ನೀಡಿ, ತದನಂತರ ಮೂವರು ಸೇರಿ ತೇಲುತ್ತಿದ್ದ ಶವವನ್ನು ಮೇಲೆಕ್ಕೆ ತಂದು, ಪೊಲೀಸರಿಗೆ ಮಾಹಿತಿ ನೀಡಿದರು.
ಗಂಗೊಳ್ಳಿ 24್ಠ7 ಆಂಬ್ಯುಲೆನ್ಸ್ ಇದರ ಇಬ್ರಾಹಿಂ ಗಂಗೊಳ್ಳಿ, ಕೆ ಎನ್ ಡಿ ಸಿಬ್ಬಂದಿ ನಿಶಾಂತ್ ಖಾರ್ವಿ, ಬೀಚ್ ಉಸ್ತುವಾರಿ ಸಿಬ್ಬಂದಿ ಸುರೇಶ್ ಕೊಡೇರಿ, ಮೃತ ರೊಹಿದಾಸ್ ಸಹೋದ್ಯೋಗಿಗಳು ಶವವನ್ನು ತೀರದಿಂದ ಸಾಗಿಸಲು ಸಹಕರಿಸಿದರು. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಸದ್ಯ ಶವವನ್ನು ಇಬ್ರಾಹಿಂ ಗಂಗೊಳ್ಳಿ ಅವರು ಕುಂದಾಪುರ ಸರಕಾರಿ ಆಸ್ಪತ್ರೆಯ ಶೀತಲೀಕರಣ ಘಟಕಕ್ಕೆ ಕೊಂಡೊಯ್ದಿದ್ದಾರೆ.
ಗoಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತ್ರಾಸಿ ಕಡಲ ಕಿನಾರೆಯಲ್ಲಿ ಕಾರ್ಯಾಚರಿಸುತ್ತಿರುವ ಬೆಳುಗಾ ವಾಟರ್ ಸ್ಪೋರ್ಟ್ಸ್ ನ ಜೆಟ್ ಸ್ಕೀ ಬೋಟ್ ನಲ್ಲಿ ಸ್ಕೀ ರೈಡರ್ ಆಗಿದ್ದ ರೋಹಿದಾಸ್ ಶನಿವಾರ ಓರ್ವ ಪ್ರವಾಸಿಗನನ್ನು ಕೂರಿಸಿಕೊಂಡು ಸಮುದ್ರದಲ್ಲಿ ವಿಹಾರ ನಡೆಸುತ್ತಿದ್ದರು. ಈ ವೇಳೆ ರೈಡರ್ ನಿಯಂತ್ರಣ ತಪ್ಪಿ ಜೆಟ್ಸ್ಕೀ ಮಗುಚಿ ಬಿದ್ದಿತ್ತು. ಈ ವೇಳೆ ಪ್ರವಾಸಿಗ ಪಾರಾಗಿದ್ದರೆ, ರೋಹಿದಾಸ್ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದರು.