
ಮಂಗಳೂರು: 20 ಅಡಿ ಆಳದ ಕಂದಕಕ್ಕೆ ಕ್ರೇನ್ ಉರುಳಿಬಿದ್ದು ಕ್ರೇನ್ ಅಪರೇಟರ್ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಅದ್ಯಪಾಡಿಯಿಂದ ಕೆಂಜಾರಿಗೆ ಕ್ರೇನ್ ಬರುತ್ತಿತ್ತು. ಕೆಂಜಾರು ವಿಮಾನ ನಿಲ್ದಾಣದ ನಿರ್ಗಮನ ದ್ವಾರದ ಬಳಿ ಕಾರ್ಯನಿರ್ವಹಿಸುತ್ತಿದ್ದ ಕ್ರೇನ್ ಪಲ್ಟಿಯಾಗಿ ಕ್ರೇನ್ ಆಪರೇಟರ್ ಪ್ರಾಣ ಕಳೆದುಕೊಂಡಿದ್ದಾರೆ. ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಉತ್ತರ ಪ್ರದೇಶದ ಕ್ರೇನ್ ಆಪರೇಟರ್ ಅರುಣ್ ಕುಮಾರ್ ಜಾಧವ್ ಮೃತಪಟ್ಟವರು. ಕ್ರೇನ್ ಅದ್ಯಪಾಡಿಯಿಂದ ಕೆಂಜಾರ್ ಜಂಕ್ಷನ್ ಕಡೆಗೆ ವಿಮಾನ ನಿಲ್ದಾಣದ ನಿರ್ಗಮನ ಮಾರ್ಗವಾಗಿ ತೆರಳುತ್ತಿತ್ತು. ರಸ್ತೆಯ ಇಳಿಜಾರಿನ ಭಾಗದಲ್ಲಿ ವಾಹನ ನಿಯಂತ್ರಣ ಕಳೆದುಕೊಂಡು 20 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ.
ಕ್ರೇನ್ ಅಡಿಗೆ ಸಿಲುಕಿಕೊಂಡ ಆಪರೇಟರ್ ಅನ್ನು ಮೇಲೆಕ್ಕೆತ್ತಲು ಸುಮಾರು ಅರ್ಧ ತಾಸು ಕಾರ್ಯಾಚರಣೆ ಮಾಡಲಾಗಿದೆ. ಇನ್ನೊಂದು ಕ್ರೇನ್ ಮೂಲಕ ಮೇಲಕ್ಕೆತ್ತಿ ಅದರಡಿಗೆ ಸಿಲುಕಿಕೊಂಡ ಅಪರೇಟರ್ ಅನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆಯಲ್ಲಿ ಅರುಣ್ ಕುಮಾರ್ ಅವರಿಗೆ ತೀವ್ರ ಗಾಯವಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.