
ಕಾಸರಗೋಡು: ವಿದೇಶದಿಂದ ಮನೆಗೆ ಬಂದು ಮದುವೆಗೆ ತಯಾರಿ ನಡೆಸುತ್ತಿದ್ದ ವೇಳೆಯೇ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮನೆಯ ಎರಡನೇ ಮಹಡಿಯ ಬೆಡ್ರೂಮ್ನಲ್ಲಿ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ವಲಿಯಪರಂ ಮಾವಿಲಕಡಪ್ಪುರಂನ ಒರಿಯಾರ ಕೆ.ಸಿ.ಹೌಸ್ನ ಕೆ.ಸಿ.ಅಬ್ದುಲ್ ಖಾದರ್ ಅವರ ಪುತ್ರ ಪಿ.ಮುಹಮ್ಮದ್ ನವಾಝ್ (27) ಆತ್ಮಹತ್ಯೆಗೆ ಶರಣಾದ ಯುವಕ. ಜ.17ರ ಶುಕ್ರವಾರ ಸಂಜೆ 6:40ರ ಸುಮಾರಿಗೆ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಮನೆಯವರು ನೇಣಿನ ಕುಣಿಕೆಯನ್ನು ಕತ್ತರಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲಾಗಲೇ ಪ್ರಾಣ ಕಳೆದುಕೊಂಡಿದ್ದರು.

ಆತ್ಮಹತ್ಯೆಗೆ ಕಾರಣವೇನು?
ವಿದೇಶದಿಂದ ಬಂದ ಯುವಕನಿಗೆ ಹುಡುಗಿಯೊಂದಿಗೆ ಮನೆಯವರು ಮದುವೆ ನಿಶ್ಚಯಿಸಿದ್ದರು. ಇವರಿಬ್ಬರು ಫೋನ್ ನಲ್ಲಿ ಹೆಚ್ಚು ಮಾತನಾಡುತ್ತಿದ್ದರು. ಹೀಗಿರುವಾಗಲೇ ಯುವತಿ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿರುವುದು ಯುವಕನಿಗೆ ತಿಳಿದು ಯುವಕ ಮಾನಸಿಕವಾಗಿ ನಲುಗಿ ಹೋಗಿದ್ದ ಎನ್ನಲಾಗಿದೆ.
ಯುವಕ ತಾನು ಮದುವೆ ನಿಶ್ಚಯಿಸಿಕೊಂಡಿದ್ದ ಯುವತಿಗೆ ಕರೆ ಮಾಡಿ ಆತ್ಮಹತ್ಯೆಗೆ ಶರಣಾಗುವುದಾಗಿ ಹೇಳಿಕೊಂಡಿದ್ದಾನೆ ಎಂಬ ಅಂಶವೂ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಇದಾದ ಬಳಿಕ ಬಾಲಕಿ ಯುವಕನ ಮನೆಯವರಿಗೆ ಮಾಹಿತಿ ನೀಡಿದ್ದಾಳೆ. ಆದರೆ ಅಷ್ಟರಲ್ಲಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದ.
ಚಾಂತೇರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಕಾಸರಗೋಡು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಿದರು.