
ಬೆಳ್ತಂಗಡಿ: ನೇತ್ರಾವತಿ ನದಿಗೆ ಇಳಿದ ವ್ಯಕ್ತಿಯೊಬ್ಬರು ಮುಳುಗಿ ನಾಪತ್ತೆಯಾದ ಘಟನೆ ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ಡಿಸೆಂಬರ್ 2ರ ಸಂಜೆ ಸಂಭವಿಸಿದೆ. ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್(38) ಕಾಣೆಯಾದ ವ್ಯಕ್ತಿ. ಇವರು ಯಾವುದೋ ಕಾರಣಕ್ಕೆ ನದಿಗೆ ಇಳಿದಿದ್ದು, ನಂತರ ಮುಳುಗಿ ಕಾಣೆಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಭೇಟಿ ನೀಡಿದ್ದು, ಮುಳುಗು ತಜ್ಞ ಈಶ್ವರ್ ಮಲ್ಪೆಯನ್ನು ಕರೆಸಲಾಗಿತ್ತು. ಪ್ರಸಾದ್ ಮೀನು ಹಿಡಿಯುವ ಬಲೆಗೆ ಸಿಕ್ಕಿಬಿದ್ದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಮೂವರು ನದಿಯ ನೀರಿಗೆ ಇಳಿದಿದ್ದು ಈ ವೇಳೆ ಪ್ರಸಾದ್ ನೀರಿನಲ್ಲಿ ಮುಳುಗಿದ್ದಾರೆ. ಪ್ರಸಾದ್ ರನ್ನು ಜತೆಗಿದ್ದವರು ರಕ್ಷಿಸಲು ಯತ್ನಿಸಿದ್ದು, ಈ ವೇಳೆ ಪ್ರಸಾದ್ ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
ಪ್ರಸಾದ್ ವಿವಾಹಿತರಾಗಿದ್ದು ಪತ್ನಿ, ಒಬ್ಬ ಪುತ್ರನಿದ್ದಾನೆ. ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಪೊಲೀಸರು ತೆರಳಿ, ತನಿಖೆ ಮುಂದುವರೆಸಿದ್ದಾರೆ. ಇನ್ನು ಪ್ರಸಾದ್ ಮೃತದೇಹಕ್ಕಾಗಿ ಸ್ಥಳೀಯರು ಮತ್ತು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.