
ಉಡುಪಿ: ಕಾರ್ಕಳ ನೀರೆ ಸಮೀಪ ಕಾರಿನಲ್ಲಿ ಅಕ್ರಮವಾಗಿ ಮಾದಕ ದ್ರವ್ಯಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಉಡುಪಿ ಸೆನ್ ಪೊಲೀಸರು ಡಿ.28ರಂದು ಮಧ್ಯಾಹ್ನ ವೇಳೆ ಬಂಧಿಸಿದ್ದಾರೆ.
ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಪ್ರೇಮನಾಥ್ ಯಾನೆ ಪ್ರೇಮ್ ಯಾನೆ ರೇವುನಾಥ್ (23), ಉಡುಪಿ ಪೆರ್ಡೂರಿನ ಶೈಲೇಶ್ ಶೆಟ್ಟಿ (24), ಕಾಪು ಬೊಮ್ಮರಬೆಟ್ಟು ನಿವಾಸಿ ಪ್ರಜ್ವಲ್ (28), ಮತ್ತು ಉಡುಪಿಯ ಬೊಮ್ಮರಬೆಟ್ಟುವಿನ ರತನ್ (27) ಬಂಧಿತರು.
ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇವರನ್ನು ಬಂಧಿಸಿದರು. ಇವರಿಂದ 2 ಲಕ್ಷ ರೂ. ಮೌಲ್ಯದ 37.27ಗ್ರಾಂ ತೂಕದ ಎಂಡಿಎಂಎ, 87,500ರೂ. ಮೌಲ್ಯದ 1.112 ಕಿ.ಲೋ. ತೂಕದ ಗಾಂಜಾ, 41ಸಾವಿರ ರೂ. ಮೌಲ್ಯದ ಐದು ಮೊಬೈಲ್, ಎರಡು ಬ್ಯಾಗ್, ಚೂರಿ, ಕೈಕೊಡಲಿ, 7130ರೂ. ನಗದು, ಒಂದು ಕಾರು ಮತ್ತು ಒಂದು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇವುಗಳ ಒಟ್ಟು ಮೌಲ್ಯ 7,86,330ರೂ. ಎಂದು ಅಂದಾಜಿಸಲಾಗಿದೆ. ಇವರಲ್ಲಿ ಪ್ರೇಮ್ ಎಂಡಿಎಂಎ ಫೌಡರನ್ನು ಬೆಂಗಳೂರು ನಿವಾಸಿ ದಾವೂದ್ ಎಂಬಾತನಿಂದ ಖರೀದಿಸಿರುವುದಾಗಿ ತಿಳಿಸಿದ್ದಾನೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.