
ಕೇಂದ್ರ ಸರ್ಕಾರ ಕರಿ ಮೆಣಸಿಗೆ ವಿಧಿಸಿದ್ದಂತಹ ಜಿಎಸ್ಟಿಯನ್ನು ಸಂಪೂರ್ಣ ತೆಗೆದು ಹಾಕಿದೆ. ಈ ಹಿನ್ನೆಲೆ ಕರಿಮೆಣಸು ಬೆಳೆಗಾರರು ಸಂಸದ ಯದುವೀರ್ ಒಡೆಯರ್ಗೆ ಧನ್ಯವಾದ ಸಲ್ಲಿಸಿದ್ದಾರೆ.
ಕೊಡಗಿನ ಗೋಣಿಕೊಪ್ಪ ಬೆಳೆಗಾರರೋಬ್ಬರಿಗೆ 1 ಕೋಟಿ ಜಿಎಸ್ಟಿ ಕಟ್ಟುವಂತೆ ನೋಟಿಸ್ ನೀಡಲಾಗಿತ್ತು. ತದನಂತರ ಅವರು ಕರ್ನಾಟಕ ಕಾಫಿ ಬೆಳೆಗಾರರ ಸಂಘ, ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್ ನಿಯೋಗದೊಂದಿಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಸಂಪರ್ಕಿಸಿ ಮನವಿಯನ್ನು ಸಲ್ಲಿಸಿದ್ದರು.
ಈ ವಿಚಾರವಾಗಿ ಸಂಸದ ಯದುವೀರ್ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನ ಸೆಳೆದಿದ್ದರು. ಈ ಕಾರಣದಿಂದ ಈಗ ಕರಿಮೆಣಸು ಬೆಳೆಗಾರರಿಗೆ ಕೇಂದ್ರ ಸಿಹಿಸುದ್ದಿ ನೀಡಿದ್ದು, ಕರಿಮೆಣಸು ಬೆಳೆಗೆ ಜಿಎಸ್ಟಿಯನ್ನು ರದ್ದು ಮಾಡಿ ಆದೇಶ ಹೊರಡಿಸಿದೆ ಎನ್ನಲಾಗಿದೆ. ಈ ಕಾರಣದಿಂದ ವಿವಿಧ ಬೆಳೆಗಾರ ಸಂಘಟನೆಗಳು ಸಂಸದ ಯದುವೀರ್ ಒಡೆಯರ್ ಅವರಿಗೆ ಕೃತಜ್ಞತೆ ಸಲ್ಲಿಸಿವೆ.