ಮನೆಗೆ ನುಗ್ಗಿ ಆರ್ ಎಸ್ ಎಸ್ ಮುಖಂಡನ ಮೇಲೆ ನಾಲ್ವರು ಮುಸ್ಲಿಂ ಯುವಕರು ಹಲ್ಲೆ ಮಾಡಿದ ಪ್ರಕರಣ ಒಂದು ಧಾರವಾಡದಲ್ಲಿ ಬೆಳಕಿಗೆ ಬಂದಿದೆ.
ಧಾರವಾಡ ನಗರದ ಹಳೆ ತಹಸೀಲ್ದಾರ್ ಕಚೇರಿ ಓಣಿಯಲ್ಲಿ ಈ ಘಟನೆ ನಡೆದಿದೆ. ಶ್ರೀಶ ಬಳ್ಳಾರಿ ಹಲ್ಲೆಗೊಳಗಾದ ಆರ್ಎಸ್ಎಸ್ ಮುಖಂಡ ಎನ್ನಲಾಗಿದೆ. ಮನೆ ಕಟ್ಟಿ ಮೇಲೆ ಈ ಯುವಕರು ಸಿಗರೇಟ್ ಸೇದುವಾಗ ದೂರಕ್ಕೆ ನಿಲ್ಲಿ ಎಂದು ಹೇಳಿದ್ದೆ ಈ ಹಲ್ಲೆಗೆ ಕಾರಣ ಎಂದು ಹೇಳಲಾಗಿದೆ.
ಹೌದು, ಯುವಕರು ಮನೆ ಕಟ್ಟೆ ಮೇಲೆ ಕೂತು ಜೋರಾಗಿ ಬೊಬ್ಬಿಡುತ್ತಾ ಸಿಗರೇಟ್ ಸೇದುತ್ತಾ ನಿಂತಿದ್ದರು. ಈ ವೇಳೆ, ಶ್ರೀಶ ಬಳ್ಳಾರಿಯವರು ದೂರಕ್ಕೆ ಹೋಗಿ ಸಿಗರೇಟು ಸೇದುವಂತೆ ಹೇಳಿದ್ದಾರೆ. ಇಷ್ಟಕ್ಕೆ ಆಕ್ರೋಶಗೊಂಡ ನಾಲ್ವರು ಮುಸ್ಲಿಂ ಯುವಕರು, ಶ್ರೀಶ ಬಳ್ಳಾರಿಯವರ ಮನೆಯೊಳಗೆ ಹೊಕ್ಕು ಕಲ್ಲು ಮತ್ತು ಮರದ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ, ಅಲ್ಲದೆ ತಡೆಯಲು ಬಂದ ಮನೆಯವರ ಮೇಲೂ ಹಲ್ಲೆ ನಡೆಸಿದ್ದಾರೆ. ಇದರಿಂದ, ಶ್ರೀಶ ಬಳ್ಳಾರಿಯವರ ಕೈ ಹಾಗೂ ಮುಖಕ್ಕೆ ತೀವ್ರ ಗಾಯವಾಗಿದೆ. ಶ್ರೀಶ ಬಳ್ಳಾರಿಯವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಧಾರವಾಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ನೂರಾರು ಕಾರ್ಯಕರ್ತರು ಠಾಣೆಯ ಮುಂದೆ ಜಮಾಯಿಸಿ, ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.